ಮಂಗಳೂರು: ಭಾರತೀಯ ಉನ್ನತ ನಾಗರಿಕ ಸೇವೆಗಳ ನೇಮಕಾತಿಗಾಗಿ (ಐಎಎಸ್, ಐಎಫ್ಎಸ್, ಐಪಿಎಸ್) ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಕಡಿತಗೊಳಿಸಲು ಮಾಜಿ ಶಿಕ್ಷಣ ಕಾರ್ಯದರ್ಶಿ ಬಿ.ಎಸ್. ಬಸ್ವಾನ್ ನೇತೃತ್ವದ ಸಮಿತಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ವರದಿ ತಿರಸ್ಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿ ಸೋಜಾ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಿಂದುಳಿದ ವರ್ಗಗಳ ನಿಯೋಗದ ಜತೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ವರದಿ ಅನುಷ್ಠಾನದಿಂದ ಆಗಬಹುದಾದ ತೊಂದರೆಗಳ ಬಗ್ಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಭೇಟಿಗೆ ಸಮಯ ಕೋರಿ ಪತ್ರ ಬರೆಯಲಾಗಿದೆ ಎಂದರು.ಪ್ರಸ್ತುತ ನಾಗರಿಕ ಸೇವೆಗಳ ಸೇರ್ಪಡೆಗಾಗಿ 32 ವರ್ಷ ಗರಿಷ್ಠ ವಯೋಮಿತಿ ಇದೆ.
ಅದರಲ್ಲೂ ಪರಿಶಿಷ್ಟ ಜಾತಿ ಪಂಗಡಗಳಿಗೆ 5 ವರ್ಷಗಳ ಸಡಿಲಿಕೆಯಿದೆ. ಹಿಂದುಳಿದ ವರ್ಗಗಳಿಗೆ 3 ವರ್ಷಗಳ ರಿಯಾಯಿತಿ ಹಾಗೂ ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆಯಿದೆ. ಆದರೆ, ಆಯೋಗ ಗರಿಷ್ಠ ವಯೋಮಿತಿಯನ್ನು ಹಂತ ಹಂತವಾಗಿ ಇಳಿಕೆ ಮಾಡಬೇಕೆಂದು ತನ್ನ ಶಿಫಾರಸ್ಸಿನಲ್ಲಿ ತಿಳಿಸಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ನಾಗೇಂದ್ರ ಕುಮಾರ್, ಮನುರಾಜ್ ಉಪಸ್ಥಿತರಿದ್ದರು.