ಮುಂಬಯಿ, ಆ.16: ಶಾಲೆಟ್ ಬ್ರಾಂಟೆ ವಿರಚಿತ ಆಂಗ್ಲ ಭಾಷೆಯ ಅನನ್ಯ ಅಭಿಜಾತ ಕೃತಿ, `ಜೇನ್ ಏರ್', ಶ್ಯಾಮಲಾ ಮಾಧವ ಅವರ ಕನ್ನಡಾನುವಾದದಲ್ಲಿ ಮೂಡಿಬಂದು, ತೇಜು ಪ್ರಕಾಶನದಿಂದ ಪ್ರಕಟವಾಗಿ ಬೆಳಕು ಕಾಣುತ್ತಿದೆ . ಇದೇ ಆ.28ನೇ ರವಿವಾರ ಸಂಜೆ 5.30 ಕ್ಕೆ , ಬೆಂಗಳೂರು ಜೆ.ಪಿ ನಗರದ ಕಪ್ಪಣ್ಣ ಸಭಾ ಭವನದಲ್ಲಿ ನಡೆವ ಕೃತಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷರಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ| ಕೆ.ವಿ ನಾರಾಯಣ ಹಾಗೂ ಅತಿಥಿüಗಳಾಗಿ ಹೆಸರಾಂತ ಸಾಹಿತಿಗಳಾದ ಡಾ| ಜಯಂತ್ ಕಾಯ್ಕಿಣಿಮತ್ತು ಎಸ್.ದಿವಾಕರ್ ಆಗಮಿಸಲಿದ್ದಾರೆ.
1847ರಲ್ಲಿ ಬೆಳಕು ಕಂಡ `ಎಚಿಟಿe ಇಥಿಡಿe', ಪ್ರಕಟವಾದೊಡನೆ ಜನಪ್ರಿಯವಾಗಿ ಅಪಾರ ಯಶಸ್ಸು ಪಡೆಯಿತು. ನಿಜ ನಾಮಧೇಯವನ್ನು ಮರೆಸಿ ಕರೆರ್ ಬೆಲ್ ಎಂದು ಪುರುಷ ನಾಮಾಂಕಿತವಾಗಿ ಪ್ರಕಟವಾದ ಕೃತಿ ಕಂಡ ಯಶಸ್ಸಿನಿಂದಾಗಿ ಮರುಮುದ್ರಣದಲ್ಲಿ ನಿಜನಾಮದೊಂದಿಗೆ ಪ್ರಕಟವಾಯ್ತು. ಲೇಖಕಿ ಇಲ್ಲಿ ಬಿಂಬಿಸಿರುವ ನೈತಿಕ ಹಾಗೂ ಧಾರ್ಮಿಕ ನೆಲೆಗಳು, ಮೌಲ್ಯಗಳು ಹಾಗೂ ಸಂಬಂಧಗಳನ್ನು ಪ್ರಶ್ನಿಸಿದ ರೀತಿ ಈ ಕೃತಿಯನ್ನು ಅತ್ಯಂತ ಮಹತ್ವಪೂರ್ಣವಾಗಿಸಿದೆ.
ಅನ್ಯಾಯ,ದಬ್ಬಾಳಿಕೆಯನ್ನೆದುರಿಸಿ ಅಸೀಮ ಆತ್ಮಬಲದಿಂದ ಎದ್ದು ನಿಲ್ಲುವ, ಪ್ರೀತಿ, ವಿಶ್ವಾಸಗಳಿಗಾಗಿ ತುಡಿವ, ಬುದ್ಧಿಭಾವಗಳ ಸಂಘರ್ಷದಲ್ಲಿ ಬುದ್ಧಿಯೇ ಮೇಲುಗೈ ಆಗುವ, ಸದಾ ಎಲ್ಲವನ್ನೂ ತೆರೆದ ಕಣ್ಣುಗಳಿಂದ, ಅಂತಃಚಕ್ಷುಗಳಿಂದ ಬಗೆದು ನೋಡುವ ಜೇನ್! ನರಕದ ಬೆಂಕಿಯಿಂದ .ತಪ್ಪಿಸಿಕೊಳ್ಳಲು ಏನು ಮಾಡಬೇಕು ಎಂಬ ಪ್ರಶ್ನೆಗೆ , ಸಾಯದಂತೆ ಆರೋಗ್ಯದಿಂದಿರ ಬೇಕೆಂದು ಉತ್ತರಿಸಿದ ಪುಟ್ಟಬಾಲೆ ಜೇನ್ !
ಅನಾಥಳಾಗಿದ್ದೂ ಅಂತಸ್ತು, ಐಶ್ವರ್ಯಗಳಲ್ಲಿ ತನಗಿಂತ ಬಲು ಎತ್ತರದಲ್ಲಿದ್ದ ಒಡೆಯ ಮಿಸ್ಟರ್ ರಾಚೆಸ್ಟರ್ ಗೆ ತಾನು ಸಮಳೆಂದೇ ಸಾರಿದ ಜೇನ್! ಸಾಮಾನ್ಯ ಕೃತಿಗಳಂತಲ್ಲದೆ ಸ್ವರೂಪ ಸುಂದರರಲ್ಲದೆ ನಾಯಕ ನಾಯಕಿಯರನ್ನು ಚಿತ್ರಿಸಿದ ವೈಶಿಷ್ಟ್ಯಪೂರ್ಣ ಲೇಖನಿಯಿದು. . ಪ್ರೀತಿ ಮತ್ತು ಮದುವೆಯಲ್ಲಿ ದೇಹ ಮತ್ತು ಆತ್ಮಗಳೆರಡರ ಸಮ್ಮಿಲನವೂ ಅಗತ್ಯವೆಂದು ಸಾರಿ ಸಂಚಲನವನ್ನೇ ಹುಟ್ಟಿಸಿದ ಕೃತಿಯಿದು. ನೈತಿಕ ಸಂಘರ್ಷದ, ಅನುಪಮ ಸ್ತ್ರೀ ಚೈತನ್ಯದ ಈ ಭಾವಪೂರ್ಣ ಕಥನವು ಚೆಲುಕನ್ನಡನುಡಿಯಲ್ಲಿ ಇಲ್ಲಿ ಪಡಿ ಮೂಡಿದೆ .
`ಮೂಲ ಕೃತಿಯ ಕುರಿತಾದ ಅವರ ತೀವ್ರ ಪ್ರೀತಿ ಮತ್ತು ಅದರೊಂದಿಗಿನ ಕ್ರಿಯಾಶೀಲ ತಾದಾತ್ಮ್ಯವೇ ಈ ಅನುವಾದದ ಜೀವಾಳವಾಗಿದೆ' ಎಂದು ಕೃತಿಗೆ ಬೆನ್ನುಡಿ ಬರೆದ ಜಯಂತ್ ಕಾಯ್ಕಿಣಿ ಅವರು ಮೆಚ್ಚುನುಡಿಗಳನ್ನಾಡಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯ ಲೋಕದ ಮಡಿಲಿಗೆ ಇನ್ನೀಗ ಶ್ಯಾಮಲಾ ಮಾಧವ ಅವರ ಮತ್ತೊಂದು ಕೃತಿ ಲೋಕಾರ್ಪಣೆ ಆಗಲಿದೆ.