ಮಂಗಳೂರು: ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಆ. 21ರಂದು ಮಂಗಳೂರಿಗೆ ಆಗಮಿಸಲಿದ್ದು, ಉಳ್ಳಾಲದಲ್ಲಿ ಜರಗಲಿರುವ 70ನೇ ಸ್ವಾತಂತ್ರ್ಯಸಂಭ್ರಮ ಹಾಗೂ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.ಅಮಿತ್ ಶಾ ಆ. 21ರಂದು ಉಳ್ಳಾಲಕ್ಕೆ ಭೇಟಿ ನೀಡಿ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಗೋವಾದಿಂದ ಅವರು ಬೆಳಗ್ಗೆ 4.30ಕ್ಕೆ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣಕ್ಕೆ ಆಗಮಿಸುವರು.
ಬೆಳಗ್ಗೆ 10 ಗಂಟೆಗೆ ನಗರದ ಬಿಜೆಪಿ ಕಚೇರಿಗೆ ಆಗಮಿಸಿ "ಗಿಡ ನೆಡಿ ಪರಿಸರ ಉಳಿಸಿ' ಕಾರ್ಯಕ್ರಮದ ಅನ್ವಯ ಗಿಡ ನೆಡಲಿದ್ದಾರೆ. 10.20ಕ್ಕೆ ಪಂಪ್ವೆಲ್ ವೃತ್ತದಲ್ಲಿ ತಿರಂಗಾ ಯಾತ್ರೆಯ ಬೃಹತ್ ವಾಹನ ರ್ಯಾಲಿ ಉದ್ಘಾಟಿಸುವರು, 11 ಗಂಟೆಗೆ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆಗೆ ಹಾರಾರ್ಪಣೆ ಮುಖಾಂತರ ಬಲಿದಾನ ಸ್ಮರಣೆ ಕಾರ್ಯಕ್ರಮ ನೆರವೇರಿಸುವರು. 11.30ಕ್ಕೆ ಕೊಣಾಜೆಯ ಮಂಗಳ ಗಂಗೋತ್ರಿ ಆವರಣದೊಳಗೆ ತಿರಂಗಾ ಯಾತ್ರೆಯ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.