ಮಂಗಳೂರು: ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಂಜನಾಡಿ ಕಲ್ಕಟ್ಟ ನಿವಾಸಿ ಆರೀಫ್ ಕಲ್ಕಟ್ಟ (27) ಎಂಬಾತನನ್ನು ಅಪಹರಣ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ನಾಪತ್ತೆಯಾಗಿರುವ ಆರೀಫ್ಗಾಗಿ ಕೊಣಾಜೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.ದುಬೈಯಲ್ಲಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಆರಿಫ್ ಐದು ತಿಂಗಳ ಹಿಂದೆ ಮಂಗಳೂರಿಗೆ ವಾಪಸ್ಸಾಗಿ ಮೀನಿನ ವ್ಯವಹಾರ ನಡೆಸುತ್ತಿದ್ದು, ವಾರದಿಂದ ನಾಪತ್ತೆಯಾಗಿದ್ದ ಆರಿಫ್ನನ್ನು ಹಣ ವಸೂಲಿಗಾಗಿ ಅಪಹರಣ ನಡೆಸಿರುವ ಸಾಧ್ಯತೆ ಇದೆ ಎನ್ನುವ ದೂರಿನಂತೆ ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿವರ : ದುಬೈಯಲ್ಲಿ ವ್ಯಾಪಾರ ನಡೆಸುತ್ತಿದ್ದ ಆರಿಫ್ಗೆ ಉಪ್ಪಿನಂಗಡಿ ನಿವಾಸಿ ಫಾರೂಕ್ ಮತ್ತು ಕೇರಳ ಬೇಕಲ ನಿವಾಸಿ ರಫೀಕ್ ರೂ. 50 ಲಕ್ಷಕ್ಕೂ ಅಧಿಕ ಹಣ ಇರಾನಿಯನ್ ಮೂಲದ ಪ್ರಜೆಯಿಂದ ಸಾಲ ತೆಗೆಸಿಕೊಟ್ಟಿದ್ದರು ಎನ್ನಲಾಗಿದೆ. ಸಾಲದ ವ್ಯವಹಾರ ಕೋಟಿಗೂ ಅಧಿಕ ಮೊತ್ತವನ್ನು ಇರಾನಿಯನ್ ಪ್ರಜೆಗೆ ನೀಡಬೇಕಾಗಿದ್ದ ಆರಿಫ್ ಐದು ತಿಂಗಳ ಹಿಂದೆ ಊರಿಗೆ ಬಂದು ಇಲ್ಲೇ ನೆಲೆಸಿದ್ದ. ಹಣ ತೆಗೆಸಿಕೊಟ್ಟ ಫಾರೂಕ್ ಮತ್ತು ರಫೀಕ್ ಊರಿಗೆ ಮರಳಿ ಆರಿಫ್ನಲ್ಲಿ ಹಣ ಮರಳಿಸುವಂತೆ ಹಲವು ಬಾರಿ ಕೇಳಿ ಕೊಂಡಿದ್ದರೆನ್ನಲಾಗಿದೆ. ಆರಿಫ್ ಆ. 11ರಂದು ಬೆಳಗ್ಗೆ 4.30ಕ್ಕೆಮೀನಿನ ವ್ಯವಹಾರಕ್ಕೆಂದು ತೆರಳಿದ್ದವ ಬರದ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪೊಲೀಸರು ಫಾರೂಕ್ನ ಉಪ್ಪಿನಂಗಡಿ ಮನೆಗೆ ಮತ್ತು ರಫೀಕ್ನ ಬೇಕಲ ಮನೆಗೆ ತೆರಳಿ ವಿಚಾರಣೆ ನಡೆಸಿದಾಗ ಎರಡೂ ಮನೆಗಳಲ್ಲಿ ಕುಟುಂಬ ಸಹಿತ ಮನೆ ಖಾಲಿ ಮಾಡಿರುವ ವಿಚಾರ ತಿಳಿದು ಬಂದಿದೆ. ಆರಿಫ್ ಸಹೋದರ ಅಲ್ತಾಫ್ ನೀಡಿದ ದೂರಿನಂತೆ ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.