ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮಿತಿಗಿಂತ ಜಾಸ್ತಿ ಇರುವ ಕುಮ್ಕಿ ಭೂಮಿ ವಶಪಡಿಸಿಕೊಂಡು ನಿವೇಶನಕ್ಕಾಗಿ ಕಾಯುತ್ತಿರುವ ಬಡವರಿಗೆ ಹಾಗೂ ಮಾಜಿ ಸೈನಿಕರಿಗೆ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಜಿಲ್ಲಾಡಳಿತಕ್ಕೆ ಸೂಚಿಸಿದರು.
ದ.ಕ. ಜಿಲ್ಲಾಡಳಿತ, ದ.ಕ. ಜಿ.ಪಂ. ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ನೇತಾರ, ಪರಿವರ್ತನೆಯ ಹರಿಕಾರ ಡಿ. ದೇವರಾಜ ಅರಸ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸಾವಿರಾರು ಮಂದಿ ಬಡವರು ಹಾಗೂ ಮಾಜಿ ಸೈನಿಕರು ಭೂಮಿಗಾಗಿ ಕಾಯುತ್ತಿದ್ದಾರೆ.
ಆದುದರಿಂದ ಜಿಲ್ಲೆಯಲ್ಲಿ ನಿಗದಿತ ಮಿತಿಗಿಂತಹೆಚ್ಚು ಇರುವ ಕುಮ್ಕಿ ಭೂಮಿ ವಶಪಡಿಸಿಕೊಂಡು ಆವಶ್ಯಕತೆ ಇರುವವರಿಗೆ ಹಂಚಲು ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಶೀಘ್ರ ಸಭೆ ನಡೆಸಿ ಅವಶ್ಯ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ಕುಮಾರ್ಅವರಿಗೆ ನಿರ್ದೇಶನ ನೀಡಿದರು..ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆ ವಹಿಸಿದ್ದರು.