ಮಂಗಳೂರು: ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಚ್.ಎಲ್. ದತ್ತು ನಗರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.ಮಂಗಳವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಬುಧವಾರ ಬೆಳಗ್ಗೆ ಕುಟುಂಬ ಸಮೇತ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಸರ್ಕ್ಯೂಟ್ ಹೌಸ್ನತ್ತ ತೆರಳಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದರು
ಕಾರಾಗೃಹದ ವಿವಿಧ ಸೆಲ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ವಿಚಾರಣಾಧೀನ ಕೈದಿಗಳ ಅಹವಾಲು ಆಲಿಸಿದರು. ಮಹಿಳಾ ಕೈದಿಗಳ ಜೈಲಿಗೂ ಭೇಟಿ ನೀಡಿ ಪರಿಶೀಲಿಸಿ ಜೈಲಿನ ಅಧೀಕ್ಷಕರ ಕೊಠಡಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ವಿಚಾರಣಾಧೀನ ಕೈದಿಗಳನ್ನು ನಿಗದಿತ ದಿನದಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಒತ್ತು ನೀಡಬೇಕು.
ಸಾಧ್ಯವಾಗದಿದ್ದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು. ನ್ಯಾಯಾಲಯಕ್ಕೆ ಹಾಜರಾಗ ಲಾಗದ ಕೈದಿಗಳಿಗೆ ಮುಂದಿನ ನ್ಯಾಯಾಲಯ ವಿಚಾರಣಾ ದಿನಾಂಕದ ಮಾಹಿತಿ ನೀಡಬೇಕು. ಕಾರಾಗೃಹದಲ್ಲಿ ಕೈದಿಗಳಿಗೆ ಅಗತ್ಯ ಮೂಲ ಸೌಕರ್ಯ ಸಮರ್ಪಕವಾಗಿರಬೇಕು ಎಂದು ಎಚ್.ಎಲ್. ದತ್ತು ಜೈಲಿನ ಅಧೀಕ್ಷಕರಿಗೆ ಸೂಚಿಸಿದರು.