ಗುರುಪುರ(ಮಂಗಳೂರು): ಗುರುಪುರ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ವೆನ್ಲಾಕ್ ಆಸ್ಪತ್ರೆಯ `ರಕ್ತನಿಧಿ ಕೇಂದ್ರ'ದ ಸಹಯೋಗದಲ್ಲಿ ನಿನ್ನೆ(ಆಗಸ್ಟ್ 28) ಗುರುಪುರ ಕುಕ್ಕದಕಟ್ಟೆ ವೈದ್ಯನಾಥ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಿದರು. ಇದು ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಜನ್ಮದಿನ ನಿಮಿತ್ತ ನಡೆದ ಕಾರ್ಯಕ್ರಮ.
ಆಧುನಿಕ ಸಮಾಜದ ಅನೇಕ ಬದಲಾವಣೆಗಳ ಹಿಂದೆ ರಾಜೀವ್ ಗಾಂಧಿಯ ಪ್ರೇರಣಾಶಕ್ತಿ ಅಡಗಿದೆ. ಅವರಿಂದಲೇ ಯುವಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಪಂಜಾಯತ್ ರಾಜ್, ಮೀಸಲಾತಿ ವಿಷಯದಲ್ಲಿ ರಾಜೀವ್ ಪಾತ್ರ ಮಹತ್ತರವಾಗಿದೆ ಎಂದ ಸಚಿವ ರೈ, ಈಗಿನ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದ್ದು, ಮನುಷ್ಯ-ಮನುಷ್ಯರಲ್ಲಿ ಅವಿಶ್ವಾಸ/ಅಪನಂಬಿಕೆ ಮತ್ತು ದ್ವೇಷ ಹುಟ್ಟುಹಾಕುವ ಕೆಲಸ ನಡೆಯುತ್ತಿದೆ. ರಕ್ತದಾನಕ್ಕೆ ಜಾತಿ, ಮತ ಧರ್ಮವಿಲ್ಲ ಎಂದರು.
``ನಾವು ಮಾಡುವ ರಕ್ತದಾನದಿಂದ ನಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಯಾವುದೋ ಒಂದು ಕಡೆ ಜೀವ ಬದುಕಿಸುವ ಕೆಲಸವಾಗುತ್ತದೆ'' ಎಂದು ಕಾಂಗ್ರೆಸ್ ಯುವ ನಾಯಕ ಮಿಥನ್ ರೈ ಹೇಳಿದರು.
ಇಂದಿನ ಜನಜೀವನದ ಆರೋಗ್ಯ ಅಗತ್ಯತೆಯಲ್ಲಿ ರಕ್ತದಾನ ಅತಿ ಅಗತ್ಯವಾಗಿದೆ. ಇದು ತ್ಯಾಗಕ್ಕೆ ಸಂಕೇತವಾಗಿದೆ ಎಂದು ಶಾಸಕ ಬಿ ಎ ಮೊೈದಿನ್ ಬಾವ ಅಭಿಪ್ರಾಯಪಟ್ಟರು.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್ ಕೆ ಪೃಥ್ವೀರಾಜ್ ಸ್ವಾಗತಿಸಿದರು. ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಬಾಷಾ, ಸಚಿನ್ ಅಡಪ, ಯು ಪಿ ಇಬ್ರಾಹಿಂ, ಉದಯ ಭಟ್, ಸೀಮಾ ಮೆಲ್ವಿನ್, ಪದ್ಮನಾಭ ಕೋಟ್ಯಾನ್, ಭಾಸ್ಕರ್ ಅಮೀನ್, ಇಸ್ಮಾಯಿಲ್, ಉಞಬ್ಬ ಹಾಗೂ ವೆನ್ಲಾಕಿನ ಡಾ ಶರತ್ ಮತ್ತವರ ತಂಡ, ಉದ್ಯಮಿ ಯತಿರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂರಾರು ಯುವಕರು ರಕ್ತದಾನ ಮಾಡಿದರು. ಇದೇ ವೇಳೆ ಅಂತಾರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟು ಗುರುಪುರದ ರಕ್ಷಿತ್ ಶೆಟ್ಟಿ ಹಾಗೂ ರಕ್ತದಾನ ಮಾಡಲು ಬಂದಿದ್ದ ಕುರುಡ ಕುಪ್ಪೆಪದವಿನ ಝಕಾರಿಯಾರನ್ನು ಕಾಂಗ್ರೆಸ್ ಮುಖಂಡರು ಶಾಲು ಹೊದಿಸಿ ಸನ್ಮಾನಿಸಿದರು. ಗಿರೀಶ್ ಧನ್ಯವಾದಗೈದರು.