ಮಂಗಳೂರು: ಎತ್ತಿನಹೊಳೆ ಯೋಜನೆಯ ಬಗ್ಗೆ ದ.ಕ.ಜನರಲ್ಲಿ ಸಾಕಷ್ಟು ತಾಂತ್ರಿಕ ಗೊಂದಲಗಳಿದ್ದು ಸರ್ಕಾರ ಇವುಗಳ ಕುರಿತ ತಜ್ಞರಿಂದ ಮಾಹಿತಿ ಕೊಡಿಸಬೇಕಿತ್ತು.ಈ ಬಗ್ಗೆ ಸಾಕಷ್ಟು ಬಾರಿ ಪ್ರತಿಭಟನೆ, ಮನವಿ ಮಾಡಿದ್ದರೂ ಸರ್ಕಾರ ಸ್ಪಂದಿಸಲಿಲ್ಲ. ಇನ್ನಾದರೂ ಮಾಹಿತಿ ನೀಡಿ ಗೊಂದಲ ನಿವಾರಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಎತ್ತಿನಹೊಳೆ ಹೋರಾಟ ಸಮಿತಿಯ ನಿಯೋಗ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಮಾತುಕತೆ ನಡೆಸಿದರು. ಕೋಲಾರ, ರಾಮನಗರ ಭಾಗದ ಜನರ ಕಷ್ಟಗಳನ್ನು ಕಣ್ಣಾರೆ ಕಂಡಿದ್ದೇನೆ. ಅವರಿಗೂ ನೀರಿನ ತೀವ್ರ ಅಗತ್ಯವಿದೆ. ಒಂದೇ ರಾಜ್ಯದ ಮಂದಿ ಎಂದಾಗ ಅಣ್ಣ, ತಮ್ಮಂದಿರಿದ್ದಂತೆ . ನಮ್ಮೊಳಗೆ ಕಲಹ ಅಲ್ಲ. ಆದರೆ, ದ.ಕ.ದಲ್ಲಿ ಸಾಕಷ್ಟು ಮಳೆಯಾಗಿಲ್ಲ. ನದಿಗಳು ತುಂಬಿ ಹರಿದಿಲ್ಲ. ಹೀಗಿರುವಾಗ ನೀರು ಕೊಡುವುದು ಹೇಗೆ ಸಾಧ್ಯ. ದ.ಕ.ಜನತೆಯ ಗೊಂದಲ ನಿವಾರಿಸಿ ಎಂದು ಕೇಳಿಕೊಂಡರು ಸ್ಪಂದಿಸುತ್ತಿಲ್ಲ. ನಮಗೂ ನೀರಿಲ್ಲ. ಅವರಿಗೂ ನೀರಿಲ್ಲ ಎಂದಾಗಬಾರದು ಎಂದು ಹೇಳಿದರು.