ದಿ.29.08.2016 ರಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ‘ಶ್ರೀ ಗುರುಪೀಠ ಪ್ರತಿóಷ್ಠೆಯ 14 ನೇ ವಾರ್ಷಿಕ ದಿನಾಚರಣೆ ಮತ್ತು ನೂತನ ಅತಿಥಿ ಗೃಹದ ಶಿಲಾನ್ಯಾಸ’ವು ಮಾಣಿಲ ಶ್ರೀಧಾಮದ ಪರಮ ಪೂಜ್ಯ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಿತು. ನಂತರ ನಡೆದ “ಧಾರ್ಮಿಕ ಸಭೆ”ಯಲ್ಲಿ ಪೂಜ್ಯರು ಆಶೀರ್ವಚನ ನೀಡುತ್ತಾ ‘ಇಲ್ಲಿನ ಮಣ್ಣಿನ ಮಹಿಮೆಯಿಂದ ಇಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿವೆ, ಇದು ಇನ್ನಷ್ಟು ಬೆಳೆದು ಯೋಗಾಶ್ರಮ ವಿಶ್ವಮಾನ್ಯವಾಗಿ ಬೆಳಗಲಿ’ ಎಂದು ಹಾರೈಸಿದರು. ಕಟೀಲು ಶ್ರೀಕ್ಷೇತ್ರದ ಆನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಕಮಲಾ ದೇವೀ ಪ್ರಸಾದ ಆಸ್ರಣ್ಣರು ‘ಇಲ್ಲಿ ಗಾಯತ್ರೀ ಪ್ರತಿಷ್ಠಾಪನೆಯ ನಂತರ ಉಪ್ಪಳ ದೇವಭೂಮಿಯಾಗಿದೆ. ಜನರು ಪ್ರಾಚೀನ ಪದ್ಧತಿಯನ್ನು ಉಳಿಸಿ ಬೆಳೆಸಲು ಇದೊಂದು ಆದರ್ಶ ಮಠವಾಗಿ ಬೆಳೆಯುತ್ತಿದೆ’ ಎಂದು ಅಭಿಪ್ರಾಯ ಪಟ್ಟರು. ಪರಮ ಪೂಜ್ಯ ಶ್ರೀಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ‘ತಾವು ನಿಮಿತ್ತ ಮಾತ್ರ ಎಲ್ಲವೂ ದೈವೇಚ್ಛೆಯಿಂದಲೇ ನಡೆಯುತ್ತಿದೆ’ ಎಂದರು ಹಾಗೂ ಈ ಸಂದರ್ಭದಲ್ಲಿ ಪ್ರಮುಖರನ್ನೊಳಗೊಂಡ ಕಿರು ಸಮಿತಿಯೊಂದನ್ನು ‘ನೂತನ ಅತಿಥಿ ಗೃಹದ’ ಕೆಲಸದ ಸಲುವಾಗಿ ಘೋಷಿಸಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಶ್ರೀ ಕೆ ಎಸ್ ಈಶ್ವರಪ್ಪನವರು ‘ಗೋಸೇವೆ, ಶ್ರೇಷ್ಠವಾದ ಅನ್ನದಾನ ವಿದ್ಯಾದಾನ,ದುರ್ವಿಚಾರ ನಿರ್ಮೂಲನ ಈ ರೀತಿಯ ಅನೇಕ ಸಮಾಜಮುಖೀ ಕಾರ್ಯಗಳನ್ನು ನಡೆಸುತ್ತಿರುವ ಇಲ್ಲಿ ಬಂದ ನಾವು ಧನ್ಯರು ಇಲ್ಲಿನ ಚಟುವಟಿಕೆಗಳಿಗೆ ತಮ್ಮ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದರು. ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯವಾದಿ ಶ್ರೀ ವೆಂಕಟೇಶ್ವರ್, ಕಾಸರಗೋಡಿನ ಡಾ/ ಮಂಜುನಾಥ್, ಕರ್ನಾಟಕ ಭಾ.ಜ.ಪ. ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಸುಲೋಚನಾ ಭಟ್, ಮಂಗಳೂರಿನ ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಮಂಗಳೂರಿನ ಡಾ/ ಆಶಾಜ್ಯೋತಿ ರೈ ಇವರುಗಳು ಸಂದರ್ಭೋಚಿತವಾಗಿ ಮಾತಾಡಿದರು. ಶ್ರೀ ಸದಾನಂದ ನಾವೂರು, ಶ್ರೀ ಎ.ಜೆ.ಶೇಖರ್, ಶ್ರೀ ಕೆ.ಪಿ.ಸುರೇಶ್, ಶ್ರೀ ಮಲ್ಲೇಶ್ ಮೈಸೂರು, ಶ್ರೀ ಚಂದ್ರಶೇಖರ್ ಉಚ್ಚಿಲ್ ಮತ್ತು ಶ್ರೀ ಶರವಣನ್ ಇವರುಗಳು ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಮತಿ ದಿವ್ಯ ಕಾರಂತರ ಪ್ರಾರ್ಥನೆಯಿಂದ ಆರಂಭಗೊಂಡ ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಗೋಪಾಲ್ ಬಂದ್ಯೋಡ್, ವಂದನಾರ್ಪಣೆಯನ್ನು ಶ್ರೀಮತಿ ಮೀರಾ ಟೀಚರ್ ಹಾಗೂ ನಿರೂಪಣೆಯನ್ನು ಶ್ರೀ ದೇವಿಪ್ರಸಾದ್ ಶೆಟ್ಟಿಯವರು ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಗಣಹೋಮ, ಗಾಯತ್ರೀ ಹವನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಂಜೆ ಶ್ರೀ ರಂಗಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು. ಮಧ್ಯಾಹ್ನದಿಂದ ಸಂಜೆಯವರೆಗೆ ತೆಂಕುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದರಿಂದ ‘ಭೀಷ್ಮ ಸೇನಾಧಿಪತ್ಯ-ಕರ್ಮ ಬಂಧ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆಯೂ ಕಲಾಭಿಮಾನಿಗಳ ಮನಸೂರೆಗೊಂಡಿತು