ಬಂಟ್ವಾಳ: ಕಷ್ಟ ದುಮ್ಮಾನಗಳನ್ನು ಯುಕ್ತಿಯಿಂದಲೇ ಎದುರಿಸಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಭಗವಾನ್ ಕೃಷ್ಣನ ಬದುಕೇ ನಮ್ಮೆಲ್ಲರಿಗೆ ಆದರ್ಶ ಎಂದು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಹೇಳಿದರು.
ಬಂಟ್ವಾಳ ದರ್ಬಲ್ಕೆಯ ಶ್ರೀ ಬಾಲಕೃಷ್ಣ ಭಜನಾಮಂದಿರದ ಆಶ್ರಯದಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ 47 ನೇ ವರ್ಷದ ಮೊಸರುಕುಡಿಕೆ ಉತ್ಸವದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಉತ್ಸವಗಳು,ಆಚರಣೆಗಳು ನಮ್ಮ ಬದುಕಿಗೆ ಚೈತನ್ಯ ನೀಡುವಂತಿರಬೇಕು,
ಆ ದೃಷ್ಟಿಯಿಂದಲೇ ಹಬ್ಬಗಳನ್ನು ಆಚರಿಸಿ ಜೀವನೋಲ್ಲಾಸ ಹೆಚ್ಚಿಸಬೇಕು ಎಂದ ಅವರು, ಕೃಷ್ಣಜನ್ಮಾಷ್ಟಮಿಯ ಎಲ್ಲಾ ಕಾರ್ಯಕ್ರಮಗಳು ನಮಗೆ ಬದುಕಿನ ಪಾಠ ಕಲಿಸುತ್ತದೆ ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಮಾತನಾಡಿ, ಭಗವಾನ್ ಶ್ರೀ ಕೃಷ್ಣ ನೀಡಿದ ಭಗವದ್ಗೀತೆ ಕೇವಲ ಭಾರತಕ್ಕೆ ಸೀಮಿತವಲ್ಲ, ಅದು ಲೋಕವೇ ಮೆಚ್ಚಿದ ಆದರ್ಶ ಗ್ರಂಥ ಎಂದರು. ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ನೇತ್ರತಜ್ಞೆ ಡಾ.ಸೌಮ್ಯ ಸದಾನಂದ, ಡಾ.ಸದಾನಂದ ಅತಿಥಿ ಸ್ಥಾನದಿಂದ ಮಾತನಾಡಿದರು.
ವೇದಿಕೆಯಲ್ಲಿ ಬಡ್ಡಕಟ್ಟೆ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀಜಿ ಟ್ರಸ್ಟ್ ಅಧ್ಯಕ್ಷ ಯೋಗೀಶ್ ಸಫಲ್ಯ, ಬಂಟ್ವಾಳ ಪುರಸಭಾ ಸದಸ್ಯ ಪ್ರವೀಣ್ ಬಿ, ದರ್ಬಲ್ಕೆ ಕನ್ಯಾಕೌಮಾರಿ ಕಲ್ಲುರ್ಟಿ ದೈವಸ್ಥಾನದ ಅಧ್ಯಕ್ಷ ನಾರಾಯಣ ಕುಲಾಲ್, ಬಂಟ್ವಾಳ ಸಂಚಾರಿ ಠಾಣೆಯ ಉಪನಿರೀಕ್ಷಕ ಚಂದ್ರಶೇಖರಯ್ಯ, ನಿಕಟಪೂರ್ವ ಅಧ್ಯಕ್ಷರುಗಳಾದ ದರ್ಬೆ ಕೃಷ್ಣನ್ಯಾಕ, ತಿಮ್ಮಯ್ಯ ಸಾಮಾನಿ, ಸಾಂತಪ್ಪ ಪೂಜಾರಿ, ಗುರುವಪ್ಪ ಮೂಲ್ಯ, ಮೊಸರುಕುಡಿಕೆ ಉತ್ಸವ ಸಮಿತಿ ಸಂಚಾಲಕ ಚಂದ್ರಶೇಖರ ಪೂಜಾರಿ ಉಪಸ್ಥಿತರಿದ್ದರು. ಶ್ರೀಬಾಲಕೃಷ್ಣ ಭಜನಾಮಂದಿರದ ಅಧ್ಯಕ್ಷ ಬಿ.ವಾಸುಪೂಜಾರಿ ಲೊರೆಟ್ಟೋ ಪ್ರಾಸ್ತಾವಿಕವಾಗಿ ಮಾತನಾಡಿ, ಮಂದಿರದ ಜೀರ್ಣೋದ್ದಾರದ ಕಾರ್ಯದಲ್ಲಿ ಊರ ಭಕ್ತಾಭಿಮಾನಿಗಳು ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಸಂಚಾರಿ ಉಪನಿರೀಕ್ಷಕ ಚಂದ್ರಶೇಖರಯ್ಯ ರವರನ್ನು ಭಜನಾಮಂದಿರ ಹಾಗೂ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ಸ್ವಯಂ ಆಸಕ್ತಿಯಿಂದ ಮಂದಿರದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಸತೀಶ್ ಆಚಾರ್ಯ ಹಾಗೂ ಸುರೇಶ್ ಆಚಾರ್ಯರನ್ನು ಗೌರವಿಸಲಾಯಿತು. ಭಜನಾಮಂದಿರದ ಪ್ರಧಾನ ಕಾರ್ಯದರ್ಶಿ ನಾಗೇಶ್ ಸ್ವಾಗತಿಸಿದರು. ಸಂದೀಪ್ ದರ್ಬೆ ವಂದಿಸಿದರು. ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರ್ವಹಿಸಿದರು.
ಫೊಟೋ ಇದೆ; ಕೃಷ್ಣವೇಷಧಾರಿಗಳ ಜತೆಗೂಡಿ ಅತಿಥಿಗಳು ಕಾರ್ಯಕ್ರಮ ಉದ್ಘಾಟಿಸಿದರು.