ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನ ಮತ್ತು ಹಿಂದೂ ದೇವ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ ಘಟನೆಯನ್ನು ಖಂಡಿಸಿ, ತಾ.2.09.2016 ಶುಕ್ರವಾರ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಭಕ್ತಾದಿಗಳೆಲ್ಲರೂ ಒಟ್ಟು ಸೇರಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.
ಯೋಗಾಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ನಂತರ ನಡೆದ ಖಂಡನಾ ಸಭೆಯಲ್ಲಿ ಪೂಜ್ಯ ಸ್ವಾಮೀಜಿಯವರು “ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು, ನಮ್ಮೆಲ್ಲರ ತಾಯಿಯ ಮೇಲೆ ಹೀನ ರೀತಿಯಲ್ಲಿ ಚಿತ್ರಿಸಿದ ದುಷ್ಕøತ್ಯ ಖಂಡನೀಯವಾದುದು. ದೇವರು ದುಷ್ಟರಿಗೂ ಒಳ್ಳೆಯ ಬುದ್ಧಿ ನೀಡಲಿ, ಮಕ್ಕಳಾದ ನಮ್ಮೆಲ್ಲರ ನೋವಿಗೆ ಮಹಾತಾಯಿ ಸಾಂತ್ವನವನ್ನು ಕರುಣಿಸಲಿ ಇನ್ನು ಮುಂದೆ ಇಂತಹ ದುಷ್ಕಾರ್ಯ ನಡೆಯದಿರಲಿ, ಸಾಮರಸ್ಯ ಕೇಂದ್ರವಾಗಿರುವ ಕಟೀಲಿನಂತಹ ಪುಣ್ಯ ಕ್ಷೇತ್ರವನ್ನಾಗಲೀ, ಇನ್ನಾವುದೇ ಧಾರ್ಮಿಕ ಕೇಂದ್ರಗಳಿಗಾಗಲೀ ಇಂತಹ ಘಟನೆ ನಡೆಯದಂತೆ ಸಂಬಂಧ ಪಟ್ಟವರು ಎಚ್ಚೆತ್ತುಕೊಳ್ಳಬೇಕೆಂದು”ಕರೆನೀಡಿದರು. ರಾ.ಸ್ವ.ಸಂ.ನ ಮಂಗಳೂರು ವಿಭಾಗ ಸಹಕಾರ್ಯವಾಹ ಶ್ರೀ ಜನಾರ್ದನ ಪ್ರತಾಪನಗರ, ಭಾ.ಜ.ಪ. ನೇತಾರ ಶ್ರೀ ಹರಿಶ್ಚಂದ್ರ ಮಂಜೇಶ್ವರ, ಸಾಮಾಜಿಕ ನೇತಾರರಾದ ಶ್ರೀ ಗೋಪಾಲ ಶೆಟ್ಟಿ ಅರಿಬೈಲು, ಶ್ರೀ ಪಿ.ಆರ್. ಶೆಟ್ಟಿ ಕುಳೂರು ಮತ್ತು ಕಾಸರಗೋಡು ಯುನೈಟೆಡ್ ಆಸ್ಪತ್ರೆಯ ಡಾ/ ಮಂಜುನಾಥ್ ರವರುಗಳು ಉಪಸ್ಥಿತರಿದ್ದು ತಮ್ಮ ಮನದ ಭಾವನೆಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ತು, ಭಜರಂಗದಳ, ಸುತ್ತುಮುತ್ತಲಿನ ಗ್ರಾಮಗಳ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಹಿಂದೂ ಸಮಾಜ ಬಾಂಧವರು ತಾಯಂದಿರು ಮತ್ತು ಮಕ್ಕಳು ಈ ಸಾಮೂಹಿಕ ಪ್ರಾರ್ಥನಾ ಮತ್ತು ಖಂಡನಾ ಸಭೆಯಲ್ಲಿ ಪಾಲ್ಗೊಂಡು ದುಷ್ಟರಿಗೆ ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥಿಸಿದರು.