ಚೆಂಬೂರುನ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ಸತ್ಯಾನಾರಾಯಣ ಮಹಾಪೂಜೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ ಸೆ.5: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಮುಂಬಯಿ ಅಂಗ ಸಂಸ್ಥೆಯು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಚೆಂಬೂರು ಛೆಡಾ ನಗರದ ಶ್ರೀ ಸುಬ್ರಹ್ಮಣ್ಯ ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಶ್ರೀ ಸತ್ಯಾನಾರಾಯಣ ಮಹಾ ಪೂಜೆ ಮತ್ತು 00ನೇ ವಾರ್ಷಿಕ ಮಹಾಸಭೆಯನ್ನು ನೆರವೇರಿಸಿತು.
ಪುರೋಹಿತ ಸುಬ್ರಹ್ಮಣ್ಯ ಐತಾಳ ತಮ್ಮ ಪೌರೋಹಿತ್ಯದಲ್ಲಿ ಶ್ರೀ ಸತ್ಯಾನಾರಾಯಣ ಮಹಾ ಪೂಜೆ ನೆರವೇರಿಸಿ ಪ್ರಸಾದವನ್ನು ವಿತರಿಸಿ ನೆರೆದ ಕೂಟ ಬಂಧುಗಳನ್ನು ತೀರ್ಥಪ್ರಸಾದ ವಿತರಿಸಿ ಹರಸಿದರು. ಗಣೇಶ್ ಹೊಳ್ಳ್ಳ ಮತ್ತು ಶ್ರೀಮತಿ ನಾಗರತ್ನ ಹೊಳ್ಳ ದಂಪತಿ ಪೂಜಾಧಿಗಳಲ್ಲಿ ಸಹಭಾಗಿಗಳಾಗಿದ್ದರು.
ಪೂರ್ವಾಹ್ನ ನಡೆಸಲಾದ ಅಧ್ಯಕ್ಷ ಯು.ಎನ್ ಐತಾಳ್ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಸಲಾಯಿತು. ಉಪಾಧ್ಯಕ್ಷ ಪಿ.ವಿ ಐತಾಳ, ಜೊತೆ ಕಾರ್ಯದರ್ಶಿ ನಾಗರತ್ನ ಹೊಳ್ಳ, ಆಡಳಿತ ವಿಶ್ವಸ್ಥ ಸದಸ್ಯರುಗಳಾದ ಹೆಚ್.ಕೆ ಕಾರಂತ್ ಮತ್ತು ರಮೇಶ್ ರಾವ್ ವೇದಿಕೆಯಲ್ಲಿ ಆಸೀನರಾಗಿದ್ದು, ಕಾರ್ಯದರ್ಶಿ ಮತ್ತು ಕೂಟ ಬ್ರಾಹ್ಮಣರ ಮುಖವಾಣಿ ಗುರು ನರಸಿಂಹವಾಣಿ ತ್ರೈಮಾಸಿಕದ ಸಂಪಾದಕ ಪಿ.ಸಿ.ಎನ್ ರಾವ್ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ ಕಾರ್ಯನಿರ್ವಾಹಣಾ ಮಾಹಿತಿ ನೀಡಿದರು. ಕೋಶಾಧಿಕಾರಿ ದೀಪಕ್ ಕಾರಂತ್ ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.
ಮಧ್ಯಾಂತರದಲ್ಲಿ ಪದಾಧಿಕಾರಿಗಳು ಕು| ತನ್ವಿ ರಾವ್, ಕು| ಶರಣ್ಯ ಹೊಳ್ಳ, ಕು| ಗಾಯತ್ರಿ ನಾಗೇಶ್ ರಾವ್, ಮಾ| ಕಾರ್ತಿಕ್ ರಾವ್, ಆದಿತ್ಯ ನಾಗೇಶ್ ರಾವ್ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು. ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ವೇತನನಿಧಿ ಹಸ್ತಾಂತರಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಬಿ.ನಾರಾಯಣ, ಸುಬ್ಬ ರಾವ್ ಸೇರಿದಂತೆ ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರನೇಕರು ಉಪಸ್ಥಿತರಿದ್ದು, ಸುದರ್ಶನ ಜೋಶಿ ಪ್ರಾರ್ಥನೆಗೈದರು. ಪಿ.ವಿ ಐತಾಳ ಸಭಾ ಕಲಾಪ ನಡೆಸಿ ಪ್ರತಿಭಾನ್ವಿತ ಮಕ್ಕಳ ಯಾದಿ ವಾಚಿಸಿದರು. ನಾಗರತ್ನ ಹೊಳ್ಳ ವಂದಿಸಿದರು. ಕೂಟ ಮಹಾಜಗತ್ತು ಇದರ ಸದಸ್ಯರು ಪೂಜಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.