ಮುಂಬಯಿ, ಸೆ.05: ಮಹಾನಗರದಲ್ಲಿ ಸುಮಾರು ಎಂಟು ದಶಕಗಳ ಹಿಂದೆ ಕನ್ನಡಾಭಿಮಾನಿಗಳಿಂದ ಮಾಟುಂಗಾ ಪರಿಸರದಲ್ಲಿ ಸ್ಥಾಪಿಸಲ್ಪಟ್ಟ ಮುಂಬಯಿ ಕನ್ನಡ ಸಂಘ (ರಿ.) ವತಿಯಿಂದ ಇಂದಿಲ್ಲಿ ಸೋಮವಾರ ಗಣಪತಿ ಹಬ್ಬ ಆಚರಿಸಲ್ಪಟ್ಟಿತು.
ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಸಂಘದ ಕಛೇರಿಯಲ್ಲಿ ವಿನಾಯಕ ಸ್ತುತಿ, ಭಜನೆಗಳೊಂದಿಗೆ ತ್ರಿದಿನ ಪೂಜಿತ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ ವಿಗ್ರಹ ಪ್ರತಿಷ್ಠಾಪನೆ, ಪೂಜೆ, ಆರತಿ, ಸಂಜೆ ಪೂಜೆ, ಮಹಾರತಿಯನ್ನು ಪುರೋಹಿತ ಸಂಜೀವ ಸಾಂಗ್ಳಿ ಆಚಾರ್ಯ ಪೂಜಾಧಿಗಳನ್ನು ನೆರವೇರಿಸಿ ಹರಸಿದರು. ಆಲ್ ಇಂಡಿಯಾ ರೆಡಿಯೋ ಮುಖ್ಯಸ್ಥ ಹಾಗೂ ಸಂಘದ ಹಿರಿಯ ಸದಸ್ಯ ಟಿ.ಎನ್ ಅಶೋಕ್ ಪೂಜಾ ಯಜಮಾನತ್ವ ವಹಿಸಿದ್ದರು. ಪಿ.ಸುಬ್ರಾಯ ಶ್ಯಾನ್ಭಾಗ್ ಗೋರೆಗಾಂ, ಜಯರಾಜ್ ಪಿ.ಸಾಲ್ಯಾನ್, ಎ.ಪಿ ಕಿಣಿ, ಕಮಲಾಕ್ಷ ಜಿ.ಸರಾಫ್ ಹಾಗೂ ಶ್ರೀ ರಂಜನಿ ಸಂಗೀತ ಸಭಾ ಡೊಂಬಿವಿಲಿ ಇವರ ಸೇವಾರ್ಥದಲ್ಲಿ ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್, ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ, ಗೌ| ಪ್ರ| ಕಾರ್ಯದರ್ಶಿ ಸತೀಶ್ ಎನ್.ಬಂಗೇರ, ಗೌರವ ಕೋಶಾಧಿಕಾರಿ ರಾಜೇಂದ್ರ ಆರ್.ಗಡಿಯಾರ್, ಜೊತೆ ಕಾರ್ಯದರ್ಶಿ ಸೋಮನಾಥ ಎಸ್.ಕರ್ಕೇರ, ವಾಚನಾಲಯಾಧಿಕಾರಿ ಎಸ್.ಕೆ ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.