ಬಂಟ್ವಾಳ, ಸೆ.07: ಮನುಷ್ಯರ ಭಾವನೆಗಳು ಜಾಗೃತವಾಗಿ ಹಿಂದೂ ಸಮಾಜ ಒಗ್ಗಟ್ಟಾದಾಗ ಮಾತ್ರ ಈ ದೇಶ ಸಂಪದ್ಬರಿತ ರಾಷ್ಟ್ರವಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯ, ಸಮಾಜವನ್ನು ಜಾತಿ ಮತ ಬೇಧವನ್ನು ಮರೆತು ಒಗ್ಗಟ್ಟಾಗಲು ಗಣೇಶೋತ್ಸವ ಆಚರಣೆಯನ್ನು ಮಾಡಲಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಡಾ| ಭಟ್ ಶ್ರೀ ರಾಮಾಂಜನೇಯ ವ್ಯಾಯಮ ಶಾಲೆ (ರಿ.) ಶಂಭೂರು ಇದರ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ದೇಶದ ಜೀವನ ಪದ್ದತಿಯ ರಕ್ಷಣೆ ಮತ್ತು ತಿಳಿವಳಿಕೆ, ಬುದ್ದಿವಂತಿಕೆಯನ್ನು ಕೊಡುವ ಕೆಲಸ ಈ ಆಚರಣೆಯಿಂದಾಗಿದೆ ಎಂದರು. ರಾಷ್ಟ್ರದ್ರೋಹದ ಕೆಲಸ ಮಾಡುವವರ ಮೇಲೆ ಸರಕಾರ ಪ್ರಕರಣ ದಾಖಲು ಮಾಡಲು ಹಿಂಜರಿಯುತ್ತಿದೆ, ಅದೇ ಹಿಂದೂಗಳ ಮೇಲೆ ನಿರಂತರವಾಗಿ ವಿನಃ ಕಾರಣ ದೌರ್ಜನ್ಯ ನಡೆಯುತ್ತಿದೆ, ಕಟೀಲು ಮಾತೆ ಶ್ರೀ ದುರ್ಗಾಪರಮೇಶ್ವರಿ ದೇವಿ ವಿರುದ್ದ ಅವಹೇಳನಕಾರಿ ಆಗಿ ಮಾತನಾಡಿದ ವರನ್ನು ಬಂಧಿಸಲು ಇಲಾಖೆಗೆ ಆಗಿಲ್ಲ. ಇದಕ್ಕೆ ಹಿಂದೂ ಸಮಾಜದ ಅಸಂಘಟಿತನ ಕಾರಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರೋದ ಪಕ್ಷದ ನಾಯಕರ ವಿಶೇಷ ಕರ್ತವ್ಯಾಧಿಕಾರಿ ಜಗನ್ನಾಥ ಬಂಗೇರ ವಹಿಸಿದ್ದರು. ವೇದಿಕೆಯಲ್ಲಿ ಬಜೆಪಿ ಮುಖಂಡ ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್, ಜಿ.ಪಂ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಜಿತೇಂದ್ರ ಎಸ್.ಕೊಟ್ಟಾರಿ ಮತ್ತು ಆಂಜನೇಯ ಮಹಿಳಾ ಮಂಡಲದ ಅಧ್ಯಕ್ಷೆ ಭವಾನಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗಣಪನ ವಿಜರ್ಸನೆ ನಡೆಯಿತು.
ಶ್ರೀ ರಾಮಾಂಜನೇಯ ವ್ಯಾಯಮ ಶಾಲೆಯ ಅಧ್ಯಕ್ಷ ಆನಂದ ಶಂಭೂರು ಸ್ವಾಗತಿಸಿ, ಪುತ್ತೂರು ರಾ.ಸ್ವ.ಸೇ ಸಂಘದ ಜಿಲ್ಲಾ ಸೇವಾ ಪ್ರಮುಖ್ ಪ್ರಸ್ತಾವನೆಗೈದರು. ರಾಮ್ದಾಸ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ತಾರಾನಾಥ ವಂದಿಸಿದರು.