ಮುಂಬಯಿ, ಸೆ.07: ಭಾರತ್ ಕೋ-ಆಪರೇಟಿವ್ ಬ್ಯಾಂಕಿನಲ್ಲಿ 24 ವರ್ಷಗಳಷ್ಟು ಸುದೀರ್ಘ ಸೇವೆ ಸಲ್ಲಿಸಿದ ಮಹಾಪ್ರಬಂಧಕರಾದ ನಿತ್ಯಾನಂದ ಡಿ. ಕೋಟ್ಯಾನ್ ಅವರು 31.08.2016 ರಂದು ಸೇವಾ ನಿವೃತ್ತರಾದರು. ನಿವೃತ್ತಿ ವೇಳೆ ಅವರು ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಿಬ್ಬಂದಿಗಳ ಪರವಾಗಿ ನಿತ್ಯಾನಂದ ಕೋಟ್ಯಾನ್ರನ್ನು ಅಭಿನಂದಿಸುವ ಕಾರ್ಯಕ್ರಮ 31.08.2016 ರಂದು ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಆಡಳಿತ ನಿರ್ದೇಶಕ ಮತ್ತು ಮುಖ್ಯ ನಿರ್ವಾಹಕ ಸಿ.ಆರ್. ಮೂಲ್ಕಿಯವರು ನಿತ್ಯಾನಂದ ಡಿ. ಕೋಟ್ಯಾನ್ರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಮಹಾಪ್ರಬಂಧಕರಾದ ಅನಿಲ್ ಕುಮಾರ್ ಆರ್. ಅಮೀನ್, ಮಾಜಿ ಮಹಾಪ್ರಬಂಧಕಿಯಾದ ಶೋಭಾ ದಯಾನಂದ್ ಉಪಸ್ಥಿತರಿದ್ದರು. ಭಾರತ್ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ಪದಾಧಿಕಾರಿಗಳು, ಭಾರತ್ ಬ್ಯಾಂಕ್ ಆಫೀಸರ್ಸ್ ಎಸೋಸಿಯೇಶನ್ನಿನ ಪದಾಧಿಕಾರಿಗಳು, ಭಾರತ್ ಬ್ಯಾಂಕ್ ವೆಲ್ಫೇರ್ ಕ್ಲಬ್ನ ಪದಾಧಿಕಾರಿಗಳು ನಿತ್ಯಾನಂದ ಡಿ. ಕೋಟ್ಯಾನ್ರನ್ನು ಅಭಿನಂದಿಸಿದರು.
ಭಾರತ್ ಬ್ಯಾಂಕ್ನ ನಿರ್ದೇಶಕ ಮಂಡಳಿ ವತಿಯಿಂದ ನಿತ್ಯಾನಂದ ಡಿ. ಕೋಟ್ಯಾನ್ ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಗೋರೆಗಾಂವ್ನ ಕೇಂದ್ರ ಕಚೇರಿಯಲ್ಲಿ ತಾ. 03.09.2016 (ಶನಿವಾರ)ರಂದು ಆಯೋಜಿಸಲಾಗಿತ್ತು. ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಜಯ ಸುವರ್ಣರು ಹಾಗೂ ಉಪಕಾರ್ಯಾಧ್ಯಕ್ಷೆ ರೋಹಿಣಿ ಜೆ. ಸಾಲ್ಯಾನ್, ನಿತ್ಯಾನಂದ ಡಿ. ಕೋಟ್ಯಾನ್ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿ ಅವರಿಗೆ ಆರೋಗ್ಯಪೂರ್ಣ, ಶಾಂತಿಯುತ ನಿವೃತ್ತ ಜೀವನವನ್ನು ಹಾರೈಸಿದರು. ನಿರ್ದೇಶಕರ ಪರವಾಗಿ ವಾಸುದೇವ ಆರ್. ಕೋಟ್ಯಾನ್, ಕೆ.ಎನ್. ಸುವರ್ಣ, ಜಯ.ಎ. ಕೋಟ್ಯಾನ್, ಯು. ಶಿವಾಜಿ ಪೂಜಾರಿ, ಭಾಸ್ಕರ್ ಎಂ. ಸಾಲ್ಯಾನ್, ಅಡ್ವಕೇಟ್ ಎಸ್.ಬಿ. ಅಮೀನ್, ಚಂದ್ರಶೇಖರ ಎಸ್. ಪೂಜಾರಿ ಮಾತನಾಡಿ ನಿತ್ಯಾನಂದ ಡಿ. ಕೋಟ್ಯಾನ್ ಅವರ ಸೇವೆಯನ್ನು ಕೊಂಡಾಡಿ, ಭಾರತ್ ಬ್ಯಾಂಕ್ 100 ಶಾಖೆಗಳನ್ನು ತೆರೆಯುವಲ್ಲಿ ಅವರ ಶ್ರಮ ತುಂಬಾ ಪ್ರಮುಖ ಪಾತ್ರವಹಿಸಿದೆ ಎಂದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರು ಹಾಗೂ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ನಿತ್ಯಾನಂದ ಡಿ. ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.