ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ದಿಢೀರ್ ದಾಳಿ ನಡೆಸಿದ ಪೊಲೀಸರು 29 ಮೊಬೈಲ್, 11 ಸಿಮ್ಕಾರ್ಡ್, 100 ಗ್ರಾಂ. ಗಾಂಜಾ, 2 ಪೆನ್ ಡ್ರೈವ್, ಮೊಬೈಲ್ ಚಾರ್ಜರ್, ಚೂರಿ, ಪಂಚ್ ಹಾಗೂ ರಾಡ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಮಿಷನರ್ ಚಂದ್ರಶೇಖರ್ ಎಂ. ಅವರ ಆದೇಶದ ಮೇರೆಗೆ ಡಿಸಿಪಿಗಳಾದ ಸಂಜೀವ ಪಾಟೀಲ್, ಶಾಂತರಾಜು, ಬರ್ಕೆ ಠಾಣಾ ನಿರೀಕ್ಷಕ ರಾಜೇಶ್, ಬಂದರು ಠಾಣಾ ನಿರೀಕ್ಷಕ ಶಾಂತಾರಾಮ್, ಕದ್ರಿ ಠಾಣಾ ನಿರೀಕ್ಷಕ ಮಾರುತಿ ನಾಯಕ್, ಉರ್ವಾ ಠಾಣಾ ನಿರೀಕ್ಷಕ ರವೀಶ್, ಸಿಸಿಬಿ ಅಧಿಕಾರಿ ಶ್ಯಾಮ್ ಸುಂದರ್, ಜೈಲಧಿಕಾರಿಗಳು ಹಾಗೂ ಸಿಬ್ಬಂದಿ ಈ ಅನಿರೀಕ್ಷಿತ ದಾಳಿ ನಡೆಸಿದ್ದರು.
ಆದರೆ, ಪೊಲೀಸರು ದಾಳಿ ನಡೆಸಲಿದ್ದಾರೆ ಎಂದು ಅರಿತಿದ್ದ ಕೈದಿಗಳು ಮೊಬೈಲ್ ಹಾಗೂ ಇತರ ವಸ್ತುಗಳನ್ನು ಕಾರಾಗೃಹದ ಕೋಣೆ, ಪ್ಲಾಸ್ಟಿಕ್ನಲ್ಲಿ ಕಟ್ಟಿ ಶೌಚಾಲಯದ ಒಳಗೆ, ಅನ್ನದ ಪಾತ್ರೆಯ ಒಳಗೆ, ಟೈಲ್ಸ್ಗಳ ಅಡಿಯಲ್ಲಿ , ಕಿಟಕಿಯ ಹೊರಭಾಗದಲ್ಲಿ, ಒಳ ಉಡುಪುಗಳಲ್ಲಿ ಹಾಗೂ ತರಕಾರಿಗಳ ಒಳಗೆ ಅಡಗಿಟ್ಟಿಸಿದ್ದರು.
ಆದಿತ್ಯವಾರ ರಾತ್ರಿ 8 ಗಂಟೆಯಿಂದ ತಡರಾತ್ರಿಯವರೆಗೆ ಪೊಲೀಸರು ಮೆಟಲ್ ಡಿಕೆಕ್ಟರ್ ಬಳಸಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಕೈದಿಗಳ ಉಪಾಯವೆಲ್ಲಾ ಬುಡಮೇಲಾಗಿದ್ದು, ಬಚ್ಚಿಟ್ಟಿದ್ದ ವಸ್ತುಗಳನ್ನು ಹಾಗೂ ಕೈದಿ ಮಹಮ್ಮದ್ ಫೈಝಲ್ನ ಕೈಯಿಂದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.