ಮಂಗಳೂರು: ಕಾವೇರಿ ನೀರಿನ ವಿವಾದವನ್ನು ಸಮರ್ಪಕವಾಗಿ ನಿರ್ವಹಿಸದ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಕೂಡಲೇ ರಾಜೀನಾಮೆ ನೀಡಲಿ. ಅವರು ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿಗಳೇ ನೀವೇ ಅವರನ್ನು ಕಿತ್ತು ಹಾಕಿ. ಇಲ್ಲದಿದ್ದರೆ ನಿಮ್ಮ ಸ್ಥಾನಕ್ಕೂ ಕುತ್ತು ಬಂದೀತು ಎಂದು ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಂದಾಳು ಬಿ.ಜನಾರ್ದನ ಪೂಜಾರಿ ಎಚ್ಚರಿಸಿದರು.
ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಎಂ.ಬಿ. ಪಾಟೀಲ್ ಅವರಿಗೆ ನೀರಾವರಿ ಖಾತೆ ಕೊಡುವಾಗ ಆಲೋಚನೆ ಮಾಡಿಲ್ಲ. ಆಗ ರಾಜ್ಯದ ಹಿತಕ್ಕಿಂತ ನಿಮಗೆ ದುಡ್ಡೇ ಮುಖ್ಯವಾಯಿತೇ ? ಕಾಂಗ್ರೆಸ್ ಪಕ್ಷ ಉಳಿಯಬೇಕಾದರೆ ಅವರನ್ನು ಮಂತ್ರಿ ಸ್ಥಾನದಿಂದ ಕಿತ್ತು ಹಾಕಲೇಬೇಕು ಎಂದರು. ಸಚಿವ ಎಂ.ಬಿ.ಪಾಟೀಲ್ ಹಾಗೂ ಎಚ್.ಕೆ.ಪಾಟೀಲ್ ಅವರು ಮಾಧ್ಯಮಗಳ ಮುಂದೆ ನಿದ್ದೆಯಲ್ಲಿ ಎದ್ದವರಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ಎಂ.ಬಿ.ಪಾಟೀಲ್ ಅವರು ಪತ್ರಕರ್ತರ ಜತೆ ಮಾತನಾಡುವಾಗ ಮಗನೇ ಎಂಬ ಶಬ್ದ ಉಪಯೋಗಿಸುತ್ತಾರೆ. ಇಂತಹ ಶಬ್ದಗಳು ನಿಮಗೆ ಶೋಭೆ ತರುವುದೇ? ಈಗಲೇ ರಾಜೀನಾಮೆ ಕೊಡಿ. ನಿಮ್ಮ ಅಗತ್ಯ ಕಾಂಗ್ರೆಸ್ಗೂ ಇಲ್ಲ, ರಾಜ್ಯದ ಜನತೆಗೂ ಇಲ್ಲ ಎಂದು ಖಾರವಾಗಿ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಜೆ.ಉಮೇಶ್ಚಂದ್ರ, ಕರುಣಾಕರ ಶೆಟ್ಟಿ, ಅರುಣ್ ಕುವೆಲ್ಲೊ ಉಪಸ್ಥಿತರಿದ್ದರು.