ಮಂಗಳೂರು: ಮಸ್ಕತ್ಗೆ ಹೊರಟ್ಟಿದ್ದ ವ್ಯಕ್ತಿಯೊಬ್ಬರು ಹೊಂದಿದ್ದ ಹ್ಯಾಂಡ್ ಬ್ಯಾಗ್ ಕೊಂಡೊಯ್ಯಲು ತಗಲುವ ಶುಲ್ಕದಲ್ಲಿ ಕೇವಲ 500 ರೂ. ಕಡಿಮೆ ಆಯಿತೆಂದು ಅವರ ಪ್ರಯಾಣನ್ನೇ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಿಬಂದಿ ತಡೆ ಹಿಡಿದ ಘಟನೆ ಮಂಗಳವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.ಉಡುಪಿಯ ವಲೇರಿಯನ್ ಮಥಾಯಸ್ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗದೆ ವಾಪಸಾದ ವ್ಯಕ್ತಿ.
ಬೆಳಗ್ಗೆ 8.55ರ ವಿಮಾನದಲ್ಲಿ ಪ್ರಯಾಣಿಸಲು ಅವರು 7.30ಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಅವರ ದೊಡ್ಡ ಲಗೇಜ್ ತಪಾಸಣೆಯ ಬಳಿಕ ಪಾಸ್ ಆಗಿತ್ತು. ಆದರೆ ಹ್ಯಾಂಡ್ ಬ್ಯಾಗ್ ನಿಗದಿತ ಗಾತ್ರಕ್ಕಿಂತ ಸುಮಾರು ಒಂದು ಇಂಚು ಉದ್ದ ಇತ್ತು. ಅದನ್ನು ಸಾಗಿಸ ಬೇಕಾದರೆ 1,500 ರೂ. ಹೆಚ್ಚುವರಿ ಶುಲ್ಕ ಪಾವತಿಸ ಬೇಕಾಗಿತ್ತು.
ವಲೇರಿಯನ್ ಅವರ ಬಳಿ ನಗದು 1,000 ರೂ. ಮಾತ್ರ ಇತ್ತು. ಕೊರತೆ ಬೀಳುವ 500 ಕೈಯಲ್ಲಿ ಇರಲಿಲ್ಲ. ಈ 500 ರೂ. ಗಳನ್ನು ತತ್ಕ್ಷಣಕ್ಕೆ ಸಂಗ್ರಹಿಸಿ ಒದಗಿಸುವ ವ್ಯವಸ್ಥೆ ಮಾಡಲು ಅವರಿಂದ ಸಾಧ್ಯವಾಗಿಲ್ಲ. ಹಾಗಾಗಿ ಮೊದಲೇ ರವಾನಿಸಿದ್ದ ಅವರ ಲಗೇಜನ್ನು ವಾಪಸ್ ತರಿಸಲಾಯಿತು ಮತ್ತು ಪ್ರಯಾಣಿಸಲು ಅನುಮತಿ ನಿರಾಕರಿಸಲಾಯಿತು ಎಂದು ಆರೋಪಿಸಲಾಗಿದೆ.ಟಿಕೆಟ್ಗಾಗಿ 14,000 ರೂ. ಪಾವತಿಸಿದ್ದು, ಅದನ್ನು ಮರಳಿ ಸುವ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ವಿಮಾನ ಕಂಪೆನಿಯ ಸಿಬಂದಿಯಿಂದ ಲಭಿಸಿಲ್ಲ ಎಂದು ಆರೋಪಿಸಿದ್ದಾರೆ. ಬಳಿಕ ಬಜಪೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಾನು ಗ್ರಾಹಕರ ನ್ಯಾಯಾಲದ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.