ಮುಂಬಯಿ, ಸೆ.15: ಅಂಧೇರಿ ಪೂರ್ವದ ಮರೋಲ್ ಅಲ್ಲಿನ ಸರ್ವಜನ ಮಹಾಗಣಪತಿ ಸೇವಾ ಮಂಡಲ (ರಿ.) ಇದರ ವತಿಯಿಂದ ಈ ಬಾರಿ 44ನೇ ವಾರ್ಷಿಕ ಗಣಪತಿ ಉತ್ಸವ ನೇರವೇರಿಸಲ್ಪಟ್ಟಿತು.
ಹನ್ನೊಂದು ದಿನಗಳೊಂದಿಗೆ ಪೂಜಿಸಲ್ಪಡುವ ಈ ಮಹಾಗಣಪತಿಯು ಸ್ಥಾನೀಯ ಬೃಹತ್ ಮಂಡಳವಾಗಿ ಪ್ರಸಿದ್ಧಿಯಲ್ಲಿದೆ. ಇಂದಿಲ್ಲಿ ನಡೆದ ಪೂಜೆಯಲ್ಲಿ ಮಂಡಲದ ಅಧ್ಯಕ್ಷ ಎಂ.ರಾಮಚಂದ್ರನ್, ಉಪಾಧ್ಯಕ್ಷ ಶ್ರೀನಿವಾಸ ಆರ್.ಕರ್ಕೇರ (ಬಿಲ್ಲವ ಸಮುದಾಯದ ಹಿರಿಯ ಮುಂದಾಳು, ಕಾಂಗ್ರೇಸ್ ನೇತಾರ), ಕಾರ್ಯದರ್ಶಿ ಎಸ್.ಎ ಮುರುಗನ್, ಸಮಾಜ ಸೇವಕ ತೋನ್ಸೆ ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
1994ರ ಸಾಲಿನಲ್ಲಿ ಜಾರ್ಜ್ ಫೆರ್ನಾಂಡಿಸ್, ಮಧು ದಂಡವತೆ ಭಾವಚಿತ್ರಗಳೊಂದಿಗೆ ಅತ್ಯಾಕರ್ಷಕ ಕೊಂಕಣ್ ರೈಲ್ವೇಯ ಮಂಡಲ ರಚಿಸಿ ಕೊಂಕಣ ಮಹಾರಾಷ್ಟ್ರ, ಗೋವಾ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತೀಯರ ಗಮನ ಸೆಳೆದ ಮಂಡಲ ಇದಾಗಿದೆ. ಮಹಾರಾಷ್ಟ್ರ ಶಾಸನ, ಲೋಕ್ಸತ್ತಾ ಗಿರ್ನಾರ್, ಬಿಎಂಸಿ ಸೇರಿದಂತೆ ಅನೇಕ ಸಂಸ್ಥೆಗಳಿಂದ ಪುರಸ್ಕೃತಗೊಂಡು ಪ್ರಶಂಸೆಗೆ ಪಾತ್ರವಾದ ಈ ಮಂಡಲ ಈ ಬಾರಿ ರೈತ ರಕ್ಷಣಾ ಧ್ಯೇಯವನ್ನಾಗಿಸಿ ಗಣೇಶೋತ್ಸವ ಸಂಭ್ರಮಿಸುತ್ತಿದೆ.