ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ ಜೈವಿಕ ವಿಜ್ಞಾನ ಮತ್ತು ಆನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರ ಶೌಚಾ ಲಯದಲ್ಲಿ ರಹಸ್ಯವಾಗಿ ಮೊಬೈಲ್ ಕೆಮರಾ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಇದೇ ವಿಶ್ವವಿದ್ಯಾನಿಲಯದ ಎಂಎಸ್ಸಿ ಮರೈನ್ ಜಿಯೋಲಜಿ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಸುಳ್ಯ ಎಡಮಂಗಲದ ಮರೋಳಿ ಮನೆಯ ಸಂತೋಷ್ ಎಂ.(22)ನನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿ ತಪ್ಪೊಪ್ಪಿಕೊಂಡಿದ್ದು ಕೃತ್ಯಕ್ಕೆ ಉಪಯೋಗಿಸಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಮಹಿಳಾ ಶೌಚಾಲಯದ ಮೇಲ್ಭಾಗದಲ್ಲಿ ಹಲಗೆಗೆ ಕನ್ನ ಕೊರೆದು ಬಿಳಿ ಬಣ್ಣದ ಬಟ್ಟೆಯಲ್ಲಿ ಸುತ್ತಿ ಇನ್ಟೆಕ್ಸ್ ಮೊಬೈಲ್ ಬಚ್ಚಿಟ್ಟಿರುವುದು ಸೆ. 1ರಂದು ಪತ್ತೆಯಾಗಿತ್ತು. ಮೊಬೈಲ್ಗೆ ಬ್ಯಾಟರಿ ಬ್ಯಾಕ್ಅಪ್ಗಾಗಿ ಪವರ್ ಬ್ಯಾಂಕ್ ಕೂಡ ಇರಿಸಲಾಗಿತ್ತು. ಜೈವಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯೊಬ್ಬರು ಅನುಮಾನದ ಮೇರೆಗೆ ಪರೀಕ್ಷಿಸಿ ದಾಗ ಈ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ವಿಶ್ವವಿದ್ಯಾನಿಲಯದ ಕುಲಸಚಿವರು ನೀಡಿದ ದೂರಿನಂತೆ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ತನಿಖೆಗಾಗಿ ಮೊಬೈಲ್ ಫೋನನ್ನು ತಜ್ಞರ ಪರೀಕ್ಷೆ ಗಾಗಿ ಹೈದರಾಬಾದ್ನ ಫೂರೆನ್ಸಿಕ್ ಲ್ಯಾಬ್ಗ ಕಳುಹಿಸಲಾಗಿದೆ. ಅದರ ವರದಿ ಇನ್ನೂ ಬಂದಿಲ್ಲ. ಆದರೆ ಡಿಸಿಪಿಗಳಾದ ಎಂ.ಎನ್. ಶಾಂತರಾಜು, ಡಾ| ಸಂಜೀವ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಎಸಿಪಿ ಶ್ರುತಿ ಎನ್.ಎಸ್. ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಮತ್ತು ಪಿಎಸ್ಐ ಸುಕುಮಾರನ್ ಅವರು ಸಿಬಂದಿ ಶಿವಪ್ರಸಾದ್ ಕೆ., ಸಂತೋಷ್, ಸುಖಲತಾ, ಮಂಜುನಾಥ ಚೌಟಗಿ, ದುರ್ಗಾ ಪ್ರಸಾದ್ ಶೆಟ್ಟಿ, ಚಂದ್ರಶೇಖರ, ಪೊಲೀಸ್ ಆಯುಕ್ತರ ಕಚೇರಿಯ ಮನೋಜ್ ಅವರ ಸಹಕಾರದಿಂದ ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದರು.