ಮಂಗಳೂರು: ಕಾವೇರಿ ಜಲವಿವಾದ ಹೊತ್ತಿ ಉರಿಯುತ್ತಿರಬೇಕಾದರೆ ಮಹಾದಾಯಿ ಯೋಜನೆಯಲ್ಲಿ 7.5 ಟಿಎಂಸಿ ನೀರನ್ನು ನಮಗೆ ನೀಡಬೇಕು ಎಂದು ಗೋವಾ ಸರಕಾರ ವಾದ ಮಂಡಿಸಿದೆ. ಸರಕಾರ ಇದನ್ನು ಲಘುವಾಗಿ ಪರಿಗಣಿಸಿದರೆ ಕಾವೇರಿ ಸ್ಥಿತಿಯೇ ಮಹಾದಾಯಿಯಲ್ಲೂ ಆಗಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದೊಡ್ಡ ಆಘಾತಕಾರಿ ಬೆಳವಣಿಗೆ. ದ.ಕ. ಜಿಲ್ಲೆಗಿಂತ ಚಿಕ್ಕ ರಾಜ್ಯವಾದ ಗೋವಾ 7.5 ಟಿಎಂಸಿ ನೀರನ್ನು ಕೇಳುತ್ತಿದೆ. ಕರ್ನಾಟಕಕ್ಕೆ ಸುಮಾರು ಐದು ಟಿಎಂಸಿಯಷ್ಟು ಕುಡಿಯುವ ನೀರಿನ ಕೊರತೆ ಇದೆ. ಸರಕಾರ ಹಾಗೂ ಮುಖ್ಯಮಂತ್ರಿಗಳು ಇನ್ನಾದರೂ ನಿದ್ರೆಯಿಂದ ಎದ್ದೇಳಿ ಇಲ್ಲವಾದಲ್ಲಿ ಮತ್ತೆ ರಾಜ್ಯದ ಜನತೆ ಬೀದಿಗಿಳಿಯಲಿದ್ದಾರೆ ಎಂದರು.ಪ್ರಧಾನಿ ಮೋದಿ ಅವರು ಕರ್ನಾಟಕ, ಗೋವಾ, ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಕರೆದು ಸಭೆ ನಡೆಸಿ ಪರಿಹಾರ ಒದಗಿಸುತ್ತಿಲ್ಲ. ಸಿದ್ದರಾಮಯ್ಯ ಈ ಬಗ್ಗೆ ಪ್ರಧಾನಿಗೆ ಒತ್ತಡ ಹೇರಿಲ್ಲ. ರಾಜ್ಯ ಸರಕಾರ ತತ್ತರಿಸಿ ಹೋಗಿದೆ. ನೀರಾವರಿ ಸಚಿವ ಎಂ.ಬಿ. ಪಾಟೀಲ್ ರಾಜ್ಯದ ಜನರ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ; ಅವರನ್ನು ಸಂಪುಟದಿಂದ ಕೈಬಿಡಿ ಎಂದು ಆಗ್ರಹಿಸಿದರು..
ಸಿದ್ದು ಬಂದಂದಿನಿಂದ ಕಾಂಗ್ರೆಸ್ಗೆ ಶನಿಕಾಟ
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಕಾಲಿಟ್ಟ ಬಳಿಕ ಕಾಂಗ್ರೆಸ್ಗೆ ಶನಿಕಾಟ ಶುರುವಾಗಿದೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷವನ್ನು ಹರಾಜು ಮಾಡುತ್ತಿ ದ್ದಾರೆ. ಅಸಮರ್ಥರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಆರೋಪಿಸಿದರು.