ಮಂಗಳೂರು: ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ, ಗೋಧಿ ಜತೆಗೆ 1 ಕೆ.ಜಿ. ಪ್ರೊಟೀನ್ಯುಕ್ತ ದ್ವಿದಳ ಧಾನ್ಯಗಳ ವಿತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದು, ಕೆಲವೇ ತಿಂಗಳಿನಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರುಬೇಳೆ, ಬೇಳೆಕಾಳು ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳ ಪೈಕಿ ಯಾವುದಾದರೂ ಒಂದನ್ನು ಕುಟುಂಬಕ್ಕೆ 1 ಕೆಜಿಯಂತೆ ನೀಡಲಾಗುವುದು.
ಇದು ದೇಶದಲ್ಲಿಯೇ ವಿನೂತನ ಪ್ರಯೋಗ ಎಂದರು. ಬಿಪಿಎಲ್ ಕಾರ್ಡ್ದಾರರಿಗೆ ಒಂದು ಎಲ್ಪಿಜಿ ಸಿಲಿಂಡರ್ ಉಚಿತ ಒದಗಿಸುವ ಕೇಂದ್ರದ ಉಜ್ವಲ ಯೋಜನೆ ರಾಜ್ಯದಲ್ಲಿ ವಿಳಂಬವಾಗುತ್ತಿದ್ದು, ಶೀಘ್ರ ಜಾರಿಗೊಳಿಸುವಂತೆ ಮನವಿ ಸಲ್ಲಿಸಲು ಕೇಂದ್ರ ಪೆಟ್ರೋಲಿಯಂ ಸಚಿವರನ್ನು ಮುಂದಿನ ತಿಂಗಳು ಭೇಟಿ ಮಾಡುವುದಾಗಿ ಸಚಿವ ಖಾದರ್ ಅವರು ತಿಳಿಸಿದರು.