ಮಂಗಳೂರು: ಕಟೀಲು ದುರ್ಗಾಪರಮೇಶ್ವರೀ ದೇವಿಯ ಬಗ್ಗೆ ನಿಂದನಾತ್ಮಕ ಬರಹ ಪ್ರಕಟಿಸಿರುವ ವಿಚಾರದ ವಿರುದ್ಧ ನಾವು ಹೋರಾಟ ನಡೆಸದಿದ್ದರೆ ಅರ್ಥ ಶೂನ್ಯ ಮತ್ತು ನಾವು ಹುಟ್ಟಿಯೂ ಪ್ರಯೋಜನವಿಲ್ಲದಂತೆ. ನಾವೆಲ್ಲ ಒಂದಾಗಿ ಧರ್ಮರಕ್ಷಣೆ ಕಾರ್ಯಕ್ಕೆ ಮುಂದಾಗಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶೀಯ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅಭಿಪ್ರಾಯಪಟ್ಟರು.ಶ್ರೀ ಕಟೀಲು ದೇವರ ಬಗ್ಗೆ ಅವಹೇಳನ ಮಾಡಿರುವ ಬಗ್ಗೆ ಕೊಲ್ಯ ಸೌಭಾಗ್ಯ ಸದನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನ ಭಕ್ತವೃಂದ ಏರ್ಪಡಿಸಿದ್ದ ಧಾರ್ಮಿಕ ಜಾಗೃತಿ ಮತ್ತು ಖಂಡನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ತಾಯಿಗಿಂತ ದೊಡ್ಡ ದೇವರಿಲ್ಲ. ಕಟೀಲಿನ ದೇವರನ್ನು ದುರ್ಗಾ ಪರಮೇಶ್ವರೀ ಎಂದು ಕರೆಯುವವರು ಕೆಲವರು ಮಾತ್ರ. ಆದರೆ ಎಲ್ಲರೂ ಕರೆಯುವುದು "ಕಟೀಲ್ದಪ್ಪೆ' ಎಂದೇ. ನಾವೆಲ್ಲ ಸ್ವಂತ ತಾಯಿಗೆ ಎಷ್ಟು ಪ್ರಾಮುಖ್ಯ ನೀಡುತ್ತೇವೆಯೋ ಅಷ್ಟೇ ಪ್ರಾಮುಖ್ಯವನ್ನು ಕಟೀಲಿನ ಅಮ್ಮನಿಗೂ ನೀಡುತ್ತೇವೆ ಎಂದರು.
ಜಿ. ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಸಂದೀಪ್ ಶೆಟ್ಟಿ ಮರವೂರು, ಕೆ.ಟಿ. ಸುವರ್ಣ, ಭಾಸ್ಕರ್ ಐತಾಳ್, ಎ.ಜೆ. ಶೇಖರ್, ಶ್ರೀಕರ ಕಿಣಿ, ಸೀತಾರಾಮ ಶೆಟ್ಟಿ ದಡಸ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಸೀತಾರಾಮ ಬಂಗೇರ ಮೊದಲಾದವರು ಭಾಗವಹಿಸಿದ್ದರು.