ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ನಡೆದ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, 5 ಮಂದಿ ಆರೋಪಿಗಳನ್ನು ಬಂಧಿಸಿ 22 ಕೆ.ಜಿ. ಬೆಳ್ಳಿ ಮತ್ತು 75 ಗ್ರಾಂ ಚಿನ್ನಾಭರಣ ಸಹಿತ ಒಟ್ಟು 12.5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಕ್ನನಡ ಜಿಲ್ಲೆ ಹೊನ್ನಾವರ ತಾಲೂಕು ಮಂಕಿ ಜನತಾ ಕಾಲನಿಯ ಚಂದ್ರಕಾಂತ ಪೂಜಾರಿ (36), ಬೆಂಗಳೂರು ದೊಡ್ಡಬಳ್ಳಾಪುರ ತಾಲೂಕಿನ ನರಸಿಂಹ ರಾಜ ಯಾನೆ ಬಸವ ರಾಜು (38), ಮುಂಬಯಿ ಥಾಣೆಯ ಲೋಕಮಾನ್ಯ ನಗರದ ನವೀನ್ಚಂದ್ರ ಬಾನ್ ಸಿಂಗ್ (21) ವಿಜಯ ಸುರೇಶ್ ಬೋಂಸ್ಲೆ (35) ಮತ್ತು ಥಾಣೆ ವೆಸ್ಟ್ನ ವಿಶಾಲ್ ಪೋನೆR (21) ಬಂಧಿತರು. ಎಲ್ಲ ಆರೋಪಿಗಳು ಈ ಹಿಂದೆ ವಿವಿಧೆಡೆ ಕಳ್ಳತನ ಮಾಡಿ ಜೈಲು ಶಿಕ್ಷೆ ಅನುಭವಿಸಿದವರಾಗಿರುತ್ತಾರೆ. ಆರೋಪಿ ಚಂದ್ರಕಾಂತ ಪೂಜಾರಿ ಈ ಪ್ರಕರಣಗಳ ಕಿಂಗ್ಪಿನ್.
ಆತನ ಮೇಲೆ ಮುಂಬಯಿ, ಉಡುಪಿ, ಕುಂದಾಪುರ, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ಪ್ರಕರಣಗಳಿವೆ. ಥಾಣೆಯಲ್ಲಿ ಈತ ಚಹಾ ಅಂಗಡಿ ನಡೆಸುತ್ತಿದ್ದಾನೆ. ಆರೋಪಿ ನರಸಿಂಹರಾಜು ಯಾನೆ ಬಸವರಾಜು ಪದವೀಧರನಾಗಿದ್ದು, ಬೆಂಗಳೂರಿನ ರಾಜಾನುಕುಂಟೆ, ಚಿಕ್ಕಪೇಟೆ, ಉಡುಪಿಯ ಪೆರ್ಡೂರು, ಕಾರ್ಕಳ ಮುಂತಾದ ಕಡೆಗಳಲ್ಲಿ ಕಳ್ಳತನ ಮಾಡಿದ ಪ್ರಕರಣಗಳಿವೆ. ಇವರಿಬ್ಬರೂ ಈ ಹಿಂದೆ ಪೊಲೀಸರಿಂದ ಬಂಧಿತರಾಗಿ ಜೈಲು ವಾಸ ಅನುಭವಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ರಾವ್ ಬೋರಸೆ ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಅಡಿಶನಲ್ ಎಸ್.ಪಿ. ಡಾ| ಸಿ.ಬಿ. ವೇದಮೂರ್ತಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.