ಮಂಗಳೂರು: ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಹರಿಸಬೇಕು ಎಂಬ ಸುಪ್ರೀಂಕೋರ್ಟ್ನ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯ ವಿಧಾನಮಂಡಲದ ಉಭಯ ಸದನಗಳು ಕೈಗೊಂಡಿರುವ ನಿರ್ಧಾರ ಮೆಚ್ಚುವಂಥದ್ದು. ಆದರೆ ನ್ಯಾಯಾಂಗ ನಿಂದನೆಯ ತೂಗುಕತ್ತಿ ರಾಜ್ಯದ ಮೇಲಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಮಂಡಲದ ನಿರ್ಣಯ ದೇಶಕ್ಕೆಮಾದರಿಯಾಗಿದೆ. ಅತ್ಯಂತ ಜಾಣತನದಿಂದ ನಿರ್ಣಯ ಮಾಡಲಾಗಿದೆ. ಎರಡು ಸದನಗಳಲ್ಲೂ ಒಮ್ಮತದ ಅಭಿಪ್ರಾಯ ಮೂಡಿ ಬಂದಿದೆ. ಇದಕ್ಕೆ ಮುಖ್ಯಮಂತ್ರಿಯವರನ್ನು ಶ್ಲಾಘಿಸುತ್ತೇನೆ ಎಂದವರು ಹೇಳಿದರು.ಆದರೆ ತಮಿಳುನಾಡು ಸರಕಾರ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ದಾಖಲಿಸಲು ನಿರ್ಧರಿಸುವುದಾಗಿ ವರದಿಯಾಗಿದೆ.
ಇದು ಸುಪ್ರೀಂ ಕೋರ್ಟ್ನ ಮುಂದೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ರೀತಿ ಸಮರ್ಥಿಸಿ ಕೊಳ್ಳುತ್ತಾರೆ ಎಂಬುದು ಪ್ರಶ್ನೆಯಾ ಗಿದೆ. ಡ್ಯಾಂನಲ್ಲಿ ನೀರಿಲ್ಲ. ಆದುದರಿಂದ ನೀರು ಬಿಡಲು ಸಾಧ್ಯ ವಿಲ್ಲ ಎಂಬ ವಾದವನ್ನು ಕೋರ್ಟ್ ಮನ್ನಾ ಮಾಡದಿದ್ದರೆ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ. ಆಗ ಮುಖ್ಯಮಂತ್ರಿ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವುದು ನಿಶ್ಚಿತ. ಇಂತಹ ಪರಿಸ್ಥಿತಿ ಎದುರಿಸುತ್ತಿರುವುದು ನನಗೆ ತುಂಬಾ ನೋವು ತಂದಿದೆ. ಅವರು ರಾಜ್ಯಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇನ್ನಷ್ಟು ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದರು.