ಮಂಗಳೂರು: ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ-ನವರಾತ್ರಿ ಮಹೋತ್ಸವ ಶನಿವಾರ ಪೂರ್ವಾಹ್ನ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠೆಯೊಂದಿಗೆ ವಿಧ್ಯುಕ್ತವಾಗಿ ಪ್ರಾರಂಭಗೊಂಡಿದೆ.ಆದಿಶಕ್ತಿ, ಮಹಾಗಣಪತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪ್ರತಿಷ್ಠಾಪನೆ ನೆರವೇರಿತು. ಶ್ರೀ ಶಾರದೆಯ ಮೂರ್ತಿ ಎಂದಿನಂತೆ ಅತ್ಯಾಕರ್ಷಕವಾಗಿ ರೂಪುಗೊಂಡಿದ್ದು, ಭಕ್ತರ ಮನ ಸೆಳೆಯುತ್ತಿದೆ.
ಪ್ರತಿಷ್ಠಾಪನೆ
ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠೆಯೊಂದಿಗೆ ನವರಾತ್ರಿ ಉತ್ಸವ ಪ್ರಾರಂಭಗೊಂಡಿತು. ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರು ದೀಪ ಬೆಳಗಿಸಿ ಉತ್ಸವಕ್ಕೆ ಚಾಲನೆ ನೀಡಿದರು. ನವರಾತ್ರಿಯ ಪರ್ವ ಕಾಲದಲ್ಲಿ ನವದುರ್ಗೆಯರ ಆರಾಧನೆಯಿಂದ ಸಮಾಜದ ದುಷ್ಟ ಶಕ್ತಿಗಳು ನಿವಾರಣೆಯಾಗಲಿ. ಎಲ್ಲೆಡೆ ಶಾಂತಿ, ಸಮೃದ್ಧಿ ವೃದ್ಧಿಸಲಿ. ದಸರಾ ಆಚರಣೆಯ ಮೂಲಕ ನಾಡಿನಲ್ಲಿ ಸುಖ ಶಾಂತಿ ನೆಲೆಸಿ ಸನ್ಮಂಗಲವಾಗಲಿ ಎಂದು ಅವರು ಹಾರೈಸಿದರು.ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಮನಪಾ ಸದಸ್ಯ ರಾಧಾಕೃಷ್ಣ, ಕ್ಷೇತ್ರದ ಪ್ರಮುಖರಾದ ಪದ್ಮರಾಜ್ ಆರ್. ನ್ಯಾಯವಾದಿ, ಮಾಲತಿ ಜನಾರ್ದನ ಪೂಜಾರಿ, ಊರ್ಮಿಳಾ ರಮೇಶ್ ಕುಮಾರ್, ಬಿ.ಕೆ. ತಾರಾನಾಥ್, ರವಿಶಂಕರ ಮಿಜಾರು, ಕೆ. ಮಹೇಶ್ಚಂದ್ರ, ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ, ಡಾ| ಬಿ.ಜಿ. ಸುವರ್ಣ, ಶೇಖರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.