ಆಯುಷ್ ವೈದ್ಯ ಪದ್ಧತಿ ಗ್ರಾಮೀಣ ಜನರಿಗೆ ತಲುಪಬೇಕು : ಡಾ ಇಕ್ಬಾಲ್
ಗುರುಪುರ, ಅ. 5 : ಗ್ರಾಮೀಣ ಪ್ರದೇಶದ ಜನರಿಗೆ ಹೋಮಿಯೋಪತಿ ಔಷಧಿ ಪದ್ಧತಿ ತಲುಪಿಸುವ ಪ್ರಯತ್ನ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆ ರೂಪಿಸಿದೆ. ಅದರಲ್ಲಿ ಪ್ರಸಕ್ತ ಆಯುಷ್ ವೈದ್ಯ ಪದ್ಧತಿ ಅಭಿವೃದ್ಧಿ ಮತ್ತು ಪ್ರಸರಣ ಮಹತ್ವದ್ದಾಗಿದೆ ಎಂದು ಆಯುಷ್ ಫೌಂಡೇಶನ್ ಮುಖ್ಯಾಧಿಕಾರಿ ಡಾ ಮೊಹಮ್ಮದ್ ಇಕ್ಬಾಲ್ ಹೇಳಿದರು.
ಅ. 2ರಂದು ಗುರುಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುರುಪುರ ಬಂಟರ ಮಾತೃ ಸಂಘ(ರಿ) ಮತ್ತು ಆಯುಷ್ ಫೌಂಡೇಶನ್ ಮಂಗಳೂರು ಆಯೋಜಿಸಿದ ಉಚಿತ ಆಯುರ್ವೇದ ಮತ್ತು ಹೋಮಿಯೋಪತಿ ಚಿಕಿತ್ಸಾ ಶಿಬಿರ ಉದ್ದೇಶಿಸಿ ಡಾ ಇಕ್ಬಾಲ್ ಮಾತನಾಡಿದರು. ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುಷ್ ಚಿಕಿತ್ಸಾ ಆಸ್ಪತ್ರೆ(50 ಹಾಸಿಗೆ) ಸಿದ್ಧಗೊಳ್ಳುತ್ತಿದೆ.
ದೇಶದಲ್ಲಿ ಈಗ ಆಯುರ್ವೇದ ಚಿಕಿತ್ಸಾ ಪದ್ಧತಿ ಜನಪ್ರಿಯಗೊಳ್ಳುತ್ತಿದೆ. ಇದು ಇನ್ನೂ ಹೆಚ್ಚಿನ ಗ್ರಾಮೀಣ ಪ್ರದೇಶದ ಜನರಿಗೆ ತಲುಪಬೇಕು. ಇದೊಂದು ಭಾರತೀಯ ವೈದ್ಯ ಪದ್ಧತಿಯಾಗಿದ್ದು, ಪ್ರಾರಂಭಿಕ ಹಂತದಲ್ಲಿ ಈ ಚಿಕಿತ್ಸಾ ವಿಧಾನ ಅನುಸರಿಸಿದರೆ ಹೆಚ್ಚಿನೆಲ್ಲ ರೋಗ ಉಪಶಮನಗೊಳ್ಳುವುದು ಎಂದು ಆಯುರ್ವೇದ ವೈದ್ಯ ದೇವದಾಸ ಪುತ್ರನ್ ತಿಳಿಸಿದರು.
ಹೋಮಿಯೋಪತಿ 220 ವರ್ಷ ಹಳೆಯದಾದ ವೈದ್ಯ ಪದ್ಧತಿ. ಇದರಲ್ಲಿ ಮಕ್ಕಳು ಮತ್ತು ವೃದ್ಧರ ಸಹಿತ ಎಲ್ಲ ವಯೋಮಾನದವರು ತಮ್ಮ ನಾನಾ ರೀತಿಯ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಈ ಚಿಕಿತ್ಸಾ ವಿಧಾನ ಇನ್ನೂ ಜನಪ್ರಿಯಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಕಂಕನಾಡಿ ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜಿನ(ದೇರಳಕಟ್ಟೆ) ಪ್ರಾಂಶುಪಾಲ ಹಾಗೂ ವೈದ್ಯಕೀಯ ಅಂಕಣಕಾರ ಡಾ ಶಿವಪ್ರಸಾದ್ ಅಭಿಪ್ರಾಯಪಟ್ಟರು.
ಜಿಲ್ಲಾ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆ(ಮಂಗಳೂರು), ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯ(ಗುರುಪುರ), ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು(ಮಂಗಳೂರು), ಕರ್ನಾಟಕ ಆಯರ್ವೇದ ವೈದ್ಯಕೀಯ ಕಾಲೇಜು(ಮಂಗಳೂರು) ಇವುಗಳ ಸಹಭಾಗಿತ್ವ ಹಾಗೂ ಸರ್ಕಾರಿ ಪಿಯು ಕಾಲೇಜು(ಗುರುಪುರ), ಯುವಕ ಸಂಘ(ಗುರುಪುರ), ವಿಜಯಲಕ್ಷ್ಮೀ ಫ್ರಂಡ್ಸ್ ಕ್ಲಬ್ ಪರಾರಿ, ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್(ಉಳಾಯಿಬೆಟ್ಟು) ಇವುಗಳ ಸಹಕಾರದೊಂದಿಗೆ ಶಿಬಿರ ಆಯೋಜಿಸಲಾಗಿತ್ತು. ಡಾ ಸತೀಶ್ ಸ್ವಾಗತಿಸಿದರೆ, ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ಶಿಬಿರದ ಮಹತ್ವ ವಿವರಿಸಿ, ಕಾರ್ಯಕ್ರಮ ನಿರೂಪಿಸಿದರು. ಗುರುಪುರದ ಹೋಮಿಯೋಪತಿ ವೈದ್ಯ ಯೋಗೀಶ್ ತಂತ್ರಿ ವಂದನಾರ್ಪಣೆಗೈದರು. ಶಿಬಿರದಿಂದ ನೂರಾರು ಮಂದಿ ಪ್ರಯೋಜನ ಪಡೆದರು.