ಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ದಸರಾ ರಜೆ ಕಡಿತ ಮಾಡಿದ್ದಷ್ಟೇ ಅಲ್ಲ, ನವೆಂಬರ್ ತಿಂಗಳಿನ ನಾಲ್ಕೂ ಶನಿವಾರ ಪೂರ್ತಿ ತರಗತಿ ನಡೆಸುವಂತೆ ಆದೇಶಿಸಿದೆ.
ಈ ಮೂಲಕ ಶಾಲೆಗಳ ಕಾರ್ಯನಿರ್ವಹಣೆ ದಿನ (ವರ್ಕಿಂಗ್ ಡೇ) ಹೆಚ್ಚಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲೇ ಹೆಚ್ಚುವರಿಯಾಗಿ ನವೆಂಬರ್ ತಿಂಗಳ ಎಲ್ಲ ಶನಿವಾರಗಳನ್ನು ಅರ್ಧ ದಿನದ ಬದಲು ದಿನಪೂರ್ತಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ. ಇದರಿಂದ 2 ಕಾರ್ಯನಿರ್ವಹಣೆ ದಿನಗಳನ್ನು ಸರಿದೂಗಿಸಿದಂತಾಗುತ್ತದೆ.ರಾಜ್ಯದಲ್ಲಿ ಪದೇ ಪದೇ ಬಂದ್ ನಡೆದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ದಸರಾ ರಜೆಯನ್ನು ಅ. 3ರ ಬದಲಾಗಿ ಅ. 9ರಿಂದ 30ರ ವರೆಗೆ ಪ್ರಕಟಿಸಿತ್ತು.
ಆದರೆ ಈಗ ಕಾರ್ಯ ನಿರ್ವಹಣೆ ದಿನವನ್ನು 234ರ ಬದಲು 242ಕ್ಕೆ ಏರಿಸಿ ಅ. 30ರ ಬದಲು ರಜೆಯನ್ನು ಅ. 23ಕ್ಕೆ ಸೀಮಿತಗೊಳಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಯಲ್ಲಿ ಒಂದು ದಿನ ಮಾತ್ರ ರಜೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳಿಗೆ ಬಂದ್ ಅನ್ವಯವಾಗಿರಲಿಲ್ಲ.
ಹಾಗಾಗಿ ದಸರಾ ರಜೆ ಕಡಿತ ಮಾಡದೇ ಅ. 3ರಿಂದಲೆ ನೀಡಬೇಕೆಂದು ಉಭಯ ಜಿಲ್ಲೆಗಳ ಶಿಕ್ಷಕರ ಸಂಘಟನೆಗಳು ಜಿ.ಪಂ. ಸಿಇಒ (ದ.ಕ.ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ), ಡಿಡಿಪಿಐ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಶಿಕ್ಷಣ ಇಲಾಖೆ ಕಮಿಷನರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರ ತಿಳಿಸಿದ್ದರು. ಇಲಾಖೆ ಕಮಿಷನರ್ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರೂ ಈ ತನಕ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಎಲ್ಲ ಕಡೆಗಳಂತೆ ಇಲ್ಲೂ ದಸರಾ ರಜೆ ಅ. 9ರಿಂದ 23ರ ವರೆಗೆ ಇರಲಿದೆ.