ಮಂಗಳೂರು: ಪ್ರಕೃತಿಯೊಂದಿಗೆ ಚೆಲ್ಲಾಟವಾಡಿದಲ್ಲಿ ಪ್ರಕೃತಿಯೇ ತಿರುಗಿಬೀಳುತ್ತದೆ. ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಮುನ್ನ ಸರಕಾರ ಎಚ್ಚೆತ್ತುಕೊಂಡು ದೃಢ ನಿರ್ಧಾರ ಕೈಗೊಳ್ಳಬೇಕು. ಜಿಲ್ಲೆಯ ಜನರನ್ನು ನಿರ್ಲಕ್ಷಿಸುವುದು ಮುಂದುವರಿಸಿದಲ್ಲಿ ಪ್ರತ್ಯೇಕ ತುಳು ರಾಜ್ಯ ರಚನೆಗೆ ಬೇಡಿಕೆಯಿಡ ಬೇಕಾದೀತು ಎಂದು ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಎಚ್ಚರಿಸಿದರು.
ಎತ್ತಿನಹೊಳೆ ಯೋಜನೆ ನಿಲ್ಲಿಸುವ ಬಗ್ಗೆ ಜಿಲ್ಲೆಯ ಜನತೆಯ ಕೂಗಿಗೆ ಸ್ಪಂದಿಸದ ಮತ್ತು ತುಳುನಾಡಿನ ಬಗ್ಗೆ ಸರಕಾರದ ಮಲತಾಯಿ ಧೋರಣೆ ಖಂಡಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಮಂಗಳವಾರ ಬೆಸೆಂಟ್ ಸರ್ಕಲ್ ಬಳಿ ಗುರುವಾರ ಆಯೋಜಿಸಲಾಗಿದ್ದ ಬೃಹತ್ ರಾಸ್ತಾರೋಕೋ ಚಳವಳಿಯಲ್ಲಿ ಅವರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಕ್ಕೆ ವಿದ್ಯಾರ್ಥಿಗಳೂ ಕೈ ಜೋಡಿಸಿರು ವುದು ಆಶಾದಾಯಕ ಬೆಳವಣಿಗೆ. ಈ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಹಿಂಸೆಗೆ ತಿರುಗುವ ಮುನ್ನ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.