ಮಂಗಳೂರು: ಚೆಂಬೇರಿ ಮೀನಿನ ತಲೆಮಾಂಸ ತಿಂದು ದ.ಕ. ಜಿಲ್ಲೆಯ ಕೆಲವೆಡೆ ಕೆಲವು ಮಂದಿ ಅಸ್ವಸ್ಥಗೊಂಡ ಪ್ರಕರಣ ಹಾಗೂ ತೊಂದೆ ಮೀನಿನ ಕೆಲವು ಭಾಗಗಳು ವಿಷಕಾರಿ ಅಂಶಗಳನ್ನು ಒಳಗೊಂಡಿರುವುದಾಗಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಈ ಎರಡೂ ಮೀನುಗಳ ಉಪಯೋಗದ ಬಗ್ಗೆ ಜಿಲ್ಲಾಡಳಿತ ಹಾಗೂ ಮೀನುಗಾರಿಕೆ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜರಗಿದ ಮತ್ಸ್ಯ ವಿಜ್ಞಾನಿಗಳು, ಮೀನುಗಾರಿಕಾ ಕಾಲೇಜಿನ ತಜ್ಞರು, ಮೀನುಗಾರಿಕೆ, ಆರೋಗ್ಯ, ಆಹಾರ ಸುರಕ್ಷೆ ಸೇರಿದಂತೆ ಸಂಬಂದಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಮೀನು ಸಂಸ್ಕರಣ ಘಟಕದವರು ಇವುಗಳ ತಲೆಗಳನ್ನು ಕ್ಯಾಂಟೀನ್ನಲ್ಲಿ ಖಾದ್ಯವಾಗಿ ಬಳಸಬಾರದು. ಸಿಬಂದಿ ಮನೆಗೆ ಒಯ್ಯದಂತೆ ಎಚ್ಚರ ವಹಿಸ ಬೇಕು ಎಂದರು. ಈ ಮೀನುಗಳ ಬಗ್ಗೆ ಪರಿಶೀಲಿಸಲು ವಿಜ್ಞಾನಿಗಳು, ಮೀನುಗಾರಿಕಾ ಅಧಿಕಾರಿಗಳು, ಆಹಾರ ಮತ್ತು ಸುರಕ್ಷತೆ ಹಾಗೂ ಆರೋಗ್ಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಶೀಘ್ರ ವರದಿ ನೀಡುವಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ| ಕೆ.ಜೆ. ಜಗದೀಶ್ ಸೂಚಿಸಿದರು.ನಿರ್ಲಕ್ಷ್ಯ ವಹಿಸುವ ಮೀನು ಸಂಸ್ಕರಣಾ ಘಟಕಗಳನ್ನು ಮುಚ್ಚಲು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದವರು ಎಚ್ಚರಿಕೆ ನೀಡಿದರು.