ಮಂಗಳೂರು ಆಕಾಶವಾಣಿ ಕೇಂದ್ರವು ಅಕ್ಟೋಬರ್ 9ರಿಂದ 11ರವರೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ಮತ್ತು ಕೊಲ್ಲೂರು ಮತ್ತು ಮಂಗಳೂರು ದಸರಾ ಕಾರ್ಯಕ್ರಮಗಳ ವಿಶೇಷ
ನೇರಪ್ರಸಾರವನ್ನು ಆಯೋಜಿಸಿದೆ.
ಅಕ್ಟೋಬರ್ 9ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ನಡೆಯುವ ಬ್ಯಾರಿ ಭಾಷಾ ಸಪ್ತಾಹದ ಸಮಾರೋಪ ಕಾರ್ಯಕ್ರಮವನ್ನು ಮಧ್ಯಾಹ್ನ 3.05ರಿಂದ 6 ಗಂಟೆಯವರೆಗೆ ನೇರಪ್ರಸಾರ ಮಾಡಲಾಗುವುದು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಮಹಾನವಮಿ ದಿನವಾದ ಅಕ್ಟೋಬರ್ 10ರಂದು ನಡೆಯುವ ಚಂಡಿಕಾಯಾಗ ಮತ್ತು ತತ್ಸಂಬಂಧಿತ ಧಾರ್ಮಿಕ ಕಾರ್ಯಕ್ರಮಗಳನ್ನು ಬೆಳಿಗ್ಗೆ 9.50 ರಿಂದ 1 ಗಂಟೆಯ ತನಕ ಮತ್ತು ಸಾಯಂಕಾಲ 4.30 ರಿಂದ 6 ಗಂಟೆಯವರೆಗೆ ನೇರಪ್ರಸಾರ ಮಾಡಲಾಗುವುದು. ಅಕ್ಟೋಬರ್ 11 ವಿಜಯದಶಮಿಯಂದು ನಡೆಯುವ ವಿದ್ಯಾರಂಭ ಮತ್ತು ನವಾನ್ನಪ್ರಾಶನ ಕುರಿತು ಬೆಳಿಗ್ಗೆ 9.50 ರಿಂದ 11.30 ಗಂಟೆಯವರೆಗೆ ನೇರಪ್ರಸಾರ ಮಾಡಲಾಗುವುದು.
ಮಂಗಳೂರು ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ 2016ರ ಶ್ರೀ ಶಾರದಾಮಾತೆಯ ಸಾಲಂಕೃತ ಮೆರವಣಿಗೆಯ ವೀಕ್ಷಕ ವಿವರಣೆಯನ್ನು ದಿನಾಂಕ 11ರಂದು ಸಾಯಂಕಾಲ 6.15ರಿಂದ 10 ಗಂಟೆಯವರೆಗೆ ನೇರಪ್ರಸಾರ ಮಾಡಲಾಗುವುದು. ಆಸಕ್ತ ಕೇಳುಗರು ಎಫ್.ಎಂ 100.3 ಮತ್ತು ಎಎಂ 1089 ಕಿಲೋಹಟ್ರ್ಸ್ ತರಂಗಾಂತರಗಳಲ್ಲಿ ನೇರಪ್ರಸಾರವನ್ನು ಆಲಿಸಬಹುದು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಸಂತಕುಮಾರ ಪೆರ್ಲ ಅವರು ತಿಳಿಸಿದ್ದಾರೆ.