ಮಂಗಳೂರು: ಕಾವೇರಿ ಕಣಿವೆ ವ್ಯಾಪ್ತಿಯ ಜಲಾಶಯಗಳನ್ನು ಪರಿಶೀಲನೆ ನಡೆಸಿರುವ ಕೇಂದ್ರ ತಜ್ಞರ ತಂಡಕ್ಕೆ ರಾಜ್ಯದ ಸಂಕಷ್ಟ ಪರಿಸ್ಥಿತಿ ಅರ್ಥವಾಗಿದ್ದು, ರಾಜ್ಯಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದ.ಕ. ಜಿಲ್ಲೆಯಲ್ಲಿ ರವಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭ ಬಜಪೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಬಗ್ಗೆ ಎರಡೂ ರಾಜ್ಯಗಳಲ್ಲಿರುವ ವಸ್ತುಸ್ಥಿತಿ ಅಧ್ಯಯನ ನಡೆಸಲು ಒಂದು ತಜ್ಞರ ತಂಡ ಕಳುಹಿಸುವಂತೆ ನಾವೇ ಕೇಳಿದ್ದು. ಕರ್ನಾಟಕ ಹಾಗೂ ತಮಿಳುನಾಡಿನ ಜಲಾಶಯಗಳಲ್ಲಿ ಎಷ್ಟು ನೀರಿದೆ, ಒಳ ಹಾಗೂ ಹೊರ ಹರಿವು ಪ್ರಮಾಣ ಎಷ್ಟಿದೆ, ಎರಡೂ ರಾಜ್ಯಗಳಲ್ಲಿ ಬಂದಿರುವ ಮಳೆಯ ಪ್ರಮಾಣ ಎಷ್ಟು, ಬೆಳೆಯ ಪರಿಸ್ಥಿತಿ ಹೇಗಿದೆ ಮುಂತಾದ ವಾಸ್ತವಾಂಶಗಳನ್ನುರಿಶೀಲನೆ ನಡೆಸುವಂತೆ ನಾವು ಮಾಡಿಕೊಂಡ ಮನವಿಗೆ ಒಪ್ಪಿ ಸುಪ್ರೀಂಕೋರ್ಟ್ ತಜ್ಞರ ತಂಡ ಕಳುಹಿಸಿದೆ. 2 ದಿನಗಳ ಕಾಲ ರಾಜ್ಯದಲ್ಲಿ ಭೂಪ್ರದೇಶ, ಜಲಾಶಯ, ಅಚ್ಚಕಟ್ಟು ಪ್ರದೇಶಗಳ ಪರಿಶೀಲನೆ ನಡೆಸಿದ್ದಾರೆ. ಇನ್ನೆರಡು ದಿನ ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತಾರೆ ಎಂದು ಹೇಳಿದರು.