ಮಂಗಳೂರು: ದ.ಕ.ಜಿಲ್ಲೆಗೆ ಮಾರಕವಾಗುವ ಎತ್ತಿನಹೊಳೆ ಯೋಜನೆಯ ವಿರುದ್ಧ ಹಲವು ಪ್ರತಿಭಟನೆ, ಹೋರಾಟಗಳು ನಡೆದರೂ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಸಹ್ಯಾದ್ರಿ ಸಂಚಯನದ ವತಿಯಿಂದ ರವಿವಾರ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಶ್ರೀ ಮಂಗಳಾದೇವಿ ದೇವಸ್ಥಾನದವರೆಗೆ ನವದುರ್ಗೆಯರ ನದಿ ರೋದನ ಎಂಬ ವಿಶಿಷ್ಟ ಪ್ರತಿಭಟನ ಜಾಥಾ ನಡೆಯಿತು.ನವರಾತ್ರಿಯ 9ನೇ ದಿನವಾದ ರವಿವಾರ ನೇತ್ರಾವತಿಯ 9 ಉಪನದಿಗಳ ಸಂಕೇತವಾಗಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಜಾಥಾವು ರಾವ್ ಆ್ಯಂಡ್ ರಾವ್ ಸರ್ಕಲ್, ಪುರಭವನದ ಎದುರಿನಿಂದ ಎ.ಬಿ.ಶೆಟ್ಟಿ ಸರ್ಕಲ್, ಪಾಂಡೇಶ್ವರದ ಮೂಲಕ ಸಾಗಿ ಮಂಗಳಾದೇವಿಯಲ್ಲಿ ಸಮಾಪನಗೊಂಡಿತು.ಮಂಗಳೂರಿನ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಎ.ಬಿ.ಶೆಟ್ಟಿ ವೃತ್ತದ ಬಳಿಯ ಸೈದಾನಿ ಬಿಬಿ ದರ್ಗಾ, ರೊಸಾರಿಯೊ ಕ್ಯಾಥೆಡ್ರಲ್ ಹಾಗೂ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ತೆರಳಿ ನೇತ್ರಾವತಿಯ ನೀರನ್ನು ಸಮರ್ಪಿಸಿ ಜಿಲ್ಲೆಗೆ ಹಾಗೂ ಪಶ್ಚಿಮ ಘಟ್ಟಕ್ಕೆ ಮಾರಕವಾಗುವ ಎತ್ತಿನಹೊಳೆ ಯೋಜನೆಯಂತೆ ನಿಲ್ಲಿಸುವಂತೆ ಪ್ರಾರ್ಥಿಸಲಾಯಿತು.