ಮಂಗಳೂರು: ಮಂಗಳೂರಿನ ಲೇಡಿಗೋಶನ್ ಸರಕಾರಿ ಆಸ್ಪತ್ರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡದ ಎಲ್ಲ ಕೆಲಸಗಳನ್ನು ಜನವರಿ ತಿಂಗಳೊಳಗೆ ಪೂರ್ತಿಗೊಳಿಸಿ ಫೆಬ್ರವರಿಯಿಂದ ರೋಗಿಗಳ ಚಿಕಿತ್ಸೆಗೆ ಲಭ್ಯವಾಗುವಂತೆ ಮಾಡಲು ಶುಕ್ರವಾರ ಜರಗಿದ ಪ್ರಗತಿ ಪರಿಶೀಲನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೂಚಿಸಿದರು.ದ.ಕ. ಜಿಲ್ಲೆಗೆ ಸಂಬಂಧಿಸಿ ಸರಕಾರದಿಂದ ಮಂಜೂರಾಗಿ ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಕ್ಕೆ ಬಾಕಿ ಇರುವ ಕಾಮಗಾರಿಗಳ ಬಗ್ಗೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ಜರಗಿತು.
ಲೇಡಿಗೋಶನ್ ಆಸ್ಪತ್ರೆಯಲ್ಲಿ ಎಂಆರ್ಪಿಎಲ್ ನೆರವಿನೊಂದಿಗೆ ನಿರ್ಮಾಣವಾಗುತ್ತಿರುವ ನೂತನ ಕಟ್ಟಡದ ಕಾಮಗಾರಿ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದ ಸಚಿವರು, ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣ ಗೊಳಿಸಬೇಕು. ಪ್ರಸ್ತುತ ಇರುವ ಗುತ್ತಿಗೆದಾರರು ನಿರ್ವ ಹಿಸುತ್ತಿರುವ ಕಾಮಗಾರಿಗಳು ನವೆಂಬರ್ ತಿಂಗಳೊಳಗೆ ಮುಕ್ತಾಯವಾಗಬೇಕು. ಉಳಿದಂತೆ ಯಂತ್ರೋ ಪಕರಣಗಳ ಅಳವಡಿಕೆ, ವಿದ್ಯುತ್ ಸಂಪರ್ಕ ಸೇರಿದಂತೆ ಇತರ ಪೂರಕ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಮತ್ತು ಫೆಬ್ರವರಿಯಿಂದ ಸಾರ್ವಜನಿಕ ಬಳಕೆಗೆ ದೊರೆಯಬೇಕು ಎಂದ ನಿರ್ದೇಶನ ನೀಡಿದರು.
ನೂತನ ಕಟ್ಟಡದ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆಸ್ಪತ್ರೆಯಲ್ಲಿ ತುರ್ತುಚಿಕಿತ್ಸಾ ಘಟಕ ಪ್ರಸ್ತುತ ಇಲ್ಲ. ನೂತನ ಕಟ್ಟಡದಲ್ಲಿ ಐಸಿಯು ಹಾಗೂ ಇತರ ಸೌಲಭ್ಯಗಳ ಅಳವಡಿಕೆಗೆ 10 ಕೋ. ರೂ. ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಅಂಬೇಡ್ಕರ್ ಭವನ ಸೇರಿದಂತೆ ಆಡಳಿತಾತ್ಮಕ ಮಂಜೂರಾತಿ ದೊರಕಿ ಟೆಂಡರ್ ಆಗಿರುವ ಎಲ್ಲ ಯೋಜನೆಗಳ ಕಾಮಗಾರಿ ಕೂಡಲೇ ಪ್ರಾರಂಭಿಸಬೇಕು. ಪಡೀಲ್ನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕುರಿತು ಹಸಿರುಪೀಠಕ್ಕೆ ಪೂರಕ ಮಾಹಿತಿ ಒದಗಿಸಿ ಯೋಜನೆ ಸಾಕಾರಗೊಳ್ಳುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದು ಸಚಿವರು ಸೂಚಿಸಿದರು.