ಮಂಗಳೂರು: ಕ್ಯಾನ್ಸರ್, ಕಿಡ್ನಿ ವೈಫಲ್ಯ ಮುಂತಾದ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆದ್ಯತೆ ಕುಟುಂಬ ಪಡಿತರ ಚೀಟಿ (ಬಿಪಿಎಲ್) ಅವಶ್ಯವಿದ್ದಲ್ಲಿ ಅದನ್ನು ತತ್ಕ್ಷಣ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಆಹಾರ ಮತ್ತು ಪಡಿತರ ಉಪನಿರ್ದೇಶಕರಿಗೆ ವಿಶೇಷ ಅಧಿಕಾರ ನೀಡಲಾಗುವುದು ಎಂದು ಸಚಿವ ಯು.ಟಿ. ಖಾದರ್ ಹೇಳಿದರು. ಮಂಗಳೂರು ತಾ.ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಮಂಗಳೂರು ತಾಲೂಕು ನ್ಯಾಯಬೆಲೆ ಅಂಗಡಿಯವರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತೀವ್ರತರ ರೋಗಗಳಿಂದ ಬಳಲುತ್ತಿರುವವರಿಗೆ ಸರಕಾರ ಯೋಜನೆಯಡಿ ಚಿಕಿತ್ಸೆ ಪಡೆಯಲು ಆದ್ಯತೆ ಕುಟುಂಬ ಪಡಿತರ ಚೀಟಿ ಅವಶ್ಯವಿರುತ್ತದೆ.
ಪ್ರಸ್ತುತ ಪಡಿತರ ಚೀಟಿ ವಿತರಣೆ ಕಾರ್ಯ ಸ್ಥಗಿತಗೊಂಡಿರುವುದರಿಂದ ಸಮಸ್ಯೆಯಾಗಿದೆ. ಆದುದರಿಂದ ಇಲಾಖೆ ಉಪನಿರ್ದೇಶಕರಿಗೆ ವಿಶೇಷ ಅಧಿಕಾರ ನೀಡಿ ಅವರಿಗೆ ಪಡಿತರ ಚೀಟಿ ಒದಗಿಸಲು ನಿರ್ಧರಿಸಲಾಗಿದೆ ಎಂದರು. ಪ್ರಧಾನಿಮಂತ್ರಿ ಉಜ್ವಲ್ ಯೋಜನೆಯಲ್ಲಿ ನಗರ ಪ್ರದೇಶದ ನಿವಾಸಿಗಳಿಗೆ ಒಂದು ಸಿಲಿಂಡರ್ ಮಾತ್ರ ಲಭ್ಯವಾಗುತ್ತದೆ. ಇದು ತಿಂಗಳು ಪೂರ್ತಿ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ಇನ್ನೊಂದು ಸಿಲಿಂಡರನ್ನು ಕರ್ನಾಟಕ ಸರಕಾರದ ವತಿಯಿಂದ ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.