ಗುರುಪುರ: ಸೇವಾ ಬ್ರಿಗೇಡ್(ರಿ) ಗುರುಪುರದ ವತಿಯಿಂದ ಅ. 23ರಂದು ಗುರುಪುರ ಚಾಮಾಣಿಯಲ್ಲಿ ಆಯೋಜಿಸಲಾಗಿದ್ದ ಭವ್ಯ ಸಮಾರಂಭವೊಂದರಲ್ಲಿ ಜನಪರ ಹಿತಕ್ಕಾಗಿ ಮೀಸಲಾಗಿರುವ ಆ್ಯಂಬುಲೆನ್ಸ್ ಸೇವೆ ಲೋಕಾರ್ಪಣೆಗೊಂಡಿತು.
ಸಮಾರಂಭದಲ್ಲಿ ಅಥಿತಿಯಾಗಿ ಮಾತನಾಡಿದ ಬಜ್ಪೆ ಪೊಲೀಸ್ ಠಾಣಾಧಿಕಾರಿ ಟಿ ಡಿ ನಾಗರಾಜ್, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಗುರುಪುರ ಸೇವಾ ಬ್ರಿಗೇಡಿನ ಸೇವಾ ಮನೋಭಾವ ಮೆಚ್ಚತಕ್ಕದ್ದು ಎನ್ನುತ್ತ, ಅಪಘಾತ ಸಂದರ್ಭಗಳಲ್ಲಿ ಸಾರ್ವಜನಿಕರ ಜಾಗೃತ ಮನೋಭಾವ ಹಾಗೂ ಕಾನೂನಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಅಪಘಾತ ಸಂಭವಿಸಿದಾಗ ಜಾತಿ-ಧರ್ಮ ಲೆಕ್ಕಸದೆ ಸಂತ್ರಸ್ತರನ್ನು ಆಸ್ಪತ್ರೆಗೆ ಸೇರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಸಂದರ್ಭಗಳಲ್ಲಿ ಕಾನೂನು ನಿಮ್ಮ ನೆರವಿಗೆ ಇರುತ್ತದೆಯೇ ಹೊರತು, ಅದಕ್ಕೆ ಭೀತಿಪಡಬೇಕಾಗಿಲ್ಲ. ಕೋರ್ಟಿನಲ್ಲಿ ಸಾಕ್ಷ್ಯಿ ನುಡಿಯುವ ಸಂದರ್ಭ ಬಂದಾಗ ಯಾರೂ ಹಿಂದೇಟು ಹಾಕಬಾರದು. ಯಾಕೆಂದರೆ ಇಂತಹದ್ದೇ ಸನ್ನಿವೇಶ(ಅಪಘಾತ !) ನಿಮ್ಮ ಜೀವನದಲ್ಲೂ ಸಂಭವಿಸಿದಾಗ ಇನ್ನೊಬ್ಬರು ಸಾಕ್ಷ್ಯಿ ನುಡಿಯಬೇಕಾಗುವುದಿಲ್ಲವೇ ? ಆಕಸ್ಮಿಕ ಮತ್ತು ಅಜಾಗರೂಕತೆಯಿಂದ ಅಪಘಾತ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಗಾಯಾಳುಗಳ ಕುಲ-ಗೋತ್ರ ನೋಡುವುದಕ್ಕಿಂತಲೂ ಅವರ ಪ್ರಾಣ ರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆ್ಯಂಬುಲೆನ್ಸ್ ಸೇವೆ ಸಮಾಜಮುಖಿಯಾಗಿರಲಿ ಎಂದರು.
ದ ಕ ಬುದ್ಧಿವಂತರ ಜಿಲ್ಲೆಯಾಗಿದ್ದರೂ, ಇಲ್ಲಿ ಸಂಸ್ಕಾರವಂತರು ಮತ್ತು ಮಾನವೀಯ ಸ್ಪಂದನೆಯ ಕೊರತೆ ಎದ್ದು ಕಂಡು ಬರುತ್ತಿದೆ. ಇದಕ್ಕೆ ಆಧುನಿಕತೆಯ ಸ್ಪರ್ಶವೂ ಕಾರಣವಾಗಿದೆ. ಜನರಲ್ಲಿ ಸಂಸ್ಕಾರ ಜಾಗೃತವಾಗಿದ್ದರೂ ಅದು ಕೃತಿ ರೂಪದಲ್ಲಿ ಪ್ರಕಟಗೊಳ್ಳಬೇಕು. `ನಾನು' ಎಂಬುದರ ಬದಲಾಗಿ `ನಾವು' ಎಂಬುದು ನಮ್ಮಲ್ಲಿ ಜಾಗೃತವಾಗಬೇಕು. ಇನ್ನೊಬ್ಬರು ನಮ್ಮ ಮೇಲೆ ದಾಳಿ ಮಾಡುವಾಗ ನಾವೆಲ್ಲರೂ ಒಂದಾಗಬೇಕು. ಊರಿನ ಈ ಆ್ಯಂಬುಲೆನ್ಸ್ ಸೇವೆ ಇದೇ ಧ್ಯೇಯ ವ್ಯಾಕ್ಯದಡಿ ಮುನ್ನಡೆಯಲಿ ಎಂದು ಇನ್ನೊಬ್ಬ ಅತಿಥಿ ರಾಜ್ಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಉಪಾಧ್ಯಕ್ಷ ಕೇಶವ ಬಂಗೇರ ಅಭಿಪ್ರಾಯಪಟ್ಟರು.
ಬ್ರಿಗೇಡಿನ ನಾಗೇಶ ಕೊಟ್ಟಾರಿ ಸ್ವಾಗತಿಸಿದರೆ, ರತ್ನಾಕರ ಜಿ ಬ್ರಿಗೇಡಿನ ಹುಟ್ಟು ಮತ್ತು ಉದ್ದೇಶ ವಿವರಿಸಿದರು. ವಕೀಲ ಜಯಪ್ರಕಾಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರೆ, ಬ್ರಿಗೇಡ್ ಪದಾಧಿಕಾರಿ ಶ್ಯಾಂ ಆಚಾರ್ಯ ವಂದಿಸಿದರು.
ಗುರುಪುರದ ಗಣ್ಯವ್ಯಕ್ತಿ ಪುರಂದರ ಮಲ್ಲಿ ನೂತನ ಆ್ಯಂಬುಲೆನ್ಸ್ ಸೇವೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ ಪಂ ಸದಸ್ಯ ಯು ಪಿ ಇಬ್ರಾಹಿಂ, ತಾ ಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾ ಪಂ ಉಪಾಧ್ಯಕ್ಷ ಉದಯ ಭಟ್, ಸದಾಶಿವ ಶೆಟ್ಟಿ, ಬ್ರಿಗೇಡಿನ ಪ್ರಮುಖರಾದ ರಮಾನಂದ ಶೆಟ್ಟಿ, ಕೃಷ್ಣ ಸಾಲ್ಯಾನ್, ವಿನೋದ್, ವಿನಯ ಬರ್ಕೆ, ಗಿರೀಶ್, ಗುರುರಾಜ್ ಆಳ್ವ, ಭವಾನಿ, ಹರೀಶ್ ಮೊದಲಾದವರು ಇದ್ದರು