ತುಳುನಾಡಿನ ಭೂತಾರಾಧನೆ, ಬೇಸಾಯ, ಪೈರಿನ ಕಟಾವು ಅವಿಭಕ್ತ ಕುಟುಂಬ ಜೀವನ ಪದ್ಧತಿ, ಸರದಿ ಸಾಲಿನಲ್ಲಿ ಹೋಗಿ ದೇವರ ದರ್ಶನ ಮಾಡುವುದು, ಮದ್ಯಪಾನ ದೂರ ಮಾಡುವುದು, ಹತ್ತು-ಹಲವು ಗ್ರಾಮೀಣ ಸಂಸ್ಕøತಿಯ ಸೊಗಡನ್ನು ಶನಿವಾರ ಧರ್ಮಸ್ಥಳದಲ್ಲಿ ದೇವಳ ನೌಕರರು ಸಾದರಪಡಿಸಿದರು. ಕುದುರೆ ಸವಾರಿ, ಭೀಕರ ಕಾದಾಟದ ಯುದ್ಧ, ಬಳಿಕ ಶಾಂತಿಯ ಸಂದೇಶ ಮನೋಜ್ಞವಾಗಿತ್ತು. ವಿಶ್ವದಲ್ಲೇ ಅತ್ಯಂತ ಎತ್ತರವಾದ ಚೀನಾದಲ್ಲಿರುವ ಬುದ್ಧನ ಮೂರ್ತಿ, ರಷ್ಯಾದ ಮದರ್ ಲ್ಯಾಂಡ್ ಕಾಲ್ಸ್, ಅಮೇರಿಕಾ ವಿಮೋಚನೆಯ ಮೂರ್ತಿ, ಬ್ರೆಜಿಲ್ ದೇಶದ ಏಸುಕ್ರಿಸ್ತನ ಮೂರ್ತಿಗಳ ಪಾವನ ದರ್ಶನವೂ ಪ್ರೇಕ್ಷಕರಿಗಾಯಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 49ನೆ ವರ್ಷದ ಪಟ್ಟಾಭಿಷೇಕ ದಿನಾಚರಣೆ ಸೋಮವಾರ ನಡೆಯಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಶನಿವಾರ ಅಮೃತವರ್ಷಿಣಿ ಸಭಾಭವನದಲ್ಲಿ ದೇವಳ ನೌಕರರಿಗಾಗಿ ಛದ್ಮವೇಶ ಸ್ಪರ್ಧೆ ಆಯೋಜಿಸಲಾಗಿತ್ತು.
ಸದಾ ತಮ್ಮ ಕರ್ತವ್ಯದಲ್ಲಿ ವ್ಯಸ್ತರಾಗಿರುವ ನೌಕರರು ಸಂತಸ-ಸಂಭ್ರಮದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಸಹೋದರ ಡಿ. ಹರ್ಷೆಂದ್ರ ಕುಮಾರ್ ಛದ್ಮವೇಶ ಸ್ಪರ್ಧೆ ವೀಕ್ಷಿಸುವುದರೊಂದಿಗೆ ತಮ್ಮ ಕ್ಯಾಮರಾಗಳಲ್ಲಿ ಫೋಟೊ ಕ್ಲಿಕ್ಕಿಸಿ, ನೌಕರರ ಸಂತಸವನ್ನು ಇಮ್ಮಡಿಗೊಳಿಸಿದರು. ಚಪ್ಪಾಳೆ ತಟ್ಟಿ ಸ್ಪರ್ಧಿಗಳನ್ನು ಹುರಿದುಂಬಿಸಿದರು.
ಪ್ರೊ. ಎಸ್. ಪ್ರಭಾಕರ್, ಹೇಮಾವತಿ ವಿ. ಹೆಗ್ಗಡೆ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.