ಮಂಗಳೂರು: ಎತ್ತಿನಹೊಳೆ ಯೋಜನೆಯ ಸಂಬಂಧ ಮುಖ್ಯಮಂತ್ರಿಗಳ ವಿರುದ್ಧ ಸಂಸದ ನಳಿನ್ಕುಮಾರ್ ಕಟೀಲು ಮಾಡುತ್ತಿರುವ ಆರೋಪಗಳಿಗೆ ಸೂಕ್ತ ಪುರಾವೆಗಳನ್ನು ಬಹಿರಂಗಪಡಿಸಲಿ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ ಆಗ್ರಹಿಸಿದರು. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದ ನಳಿನ್ ಪುರಾವೆ ಇಲ್ಲದೆ ಮಾತನಾಡುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯಲ್ಲಿ ಬಿಜೆಪಿಯವರ ಬಳಿಯೇ ದ್ವಂದ್ವ ನಿಲುವುಗಳಿವೆ ಎಂದರು.
ಯೋಜನೆಯ ಕುರಿತು ಮೊದಲು ಡಿಪಿಆರ್ ತಯಾರಾದುದು ಬಿಜೆಪಿ ಸರಕಾರದ ಅವಧಿಯಲ್ಲೇ. ಡಿ.ವಿ. ಯೋಜನೆ ಜಾರಿಗೆ ಮುಂಚೂಣಿಯಲ್ಲಿದ್ದರು. ಶೆಟ್ಟರ್ ಸಿಎಂ ಆಗಿದ್ದ ಸಂದರ್ಭ ಯೋಜನೆಗೆ ಒಪ್ಪಿಗೆ ನೀಡಿದ್ದರು. ಹೀಗಾಗಿ ಎತ್ತಿನಹೊಳೆ ಯೋಜನೆ ಬಿಜೆಪಿ ಕನಸಿನ ಕೂಸು ಎಂದು ಆರೋಪಿಸಿದರು.ಐಐಎಸ್ಸಿ ವರದಿ, ಹೊಸ ಡಿಪಿಆರ್ ಕುರಿತು ನನಗೆ ಯಾವುದೇ ವಿಚಾರಗಳು ತಿಳಿದಿಲ್ಲ. ಈ ಕುರಿತು ಮುಖ್ಯಮಂತ್ರಿ ಅವರ ಬಳಿಯೇ ಕೇಳಬೇಕು. ಹೀಗಾಗಿ ಶೀಘ್ರದಲ್ಲಿ ಈ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಸಭೆ ಕರೆಯಲಿದ್ದಾರೆ. ಎತ್ತಿನಹೊಳೆ ಯೋಜನೆಯನ್ನು ಬಿಟ್ಟು ಉಳಿದಂತೆ ಜಿಲ್ಲೆಯ ಕುಡಿಯುವ ನೀರಿಗೆ ತೊಂದರೆಯಾಗುವ ಯಾವುದೇ ಯೋಜನೆ ಸರಕಾರದ ಮುಂದಿಲ್ಲ. ಅಂತಹ ಯೋಜನೆಗಳಿದ್ದರೆ ಅದನ್ನು ನಾನು ಕೂಡ ವಿರೋಧಿಸುತ್ತೇನೆ ಎಂದು ಐವನ್ ತಿಳಿಸಿದರು.