ಮಂಗಳೂರು: ಪುರುಷರ ಲೈಂಗಿಕ ಆಸಕ್ತಿ ಶಮನ ಮಾಡಲು ಬಹುಪತ್ನಿತ್ವ ಅಗತ್ಯವಿದೆ. ಲೈಂಗಿಕ ತೃಪ್ತಿಗೋಸ್ಕರ ಗಂಡಸರು ಎಷ್ಟು ಬೇಕಾದರೂ ಮದುವೆಯಾಗಬಹುದು ಎಂದು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಅವರ ಹೇಳಿಕೆ ಮಹಿಳೆಯರಿಗೆ ಮಾಡಿರುವ ಅವಮಾನವಾಗಿದ್ದು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಜಿ.ಕೆ. ಭಟ್ ಅವರು ಆಗ್ರಹಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಡಿಜಾಲ್ ಇಬ್ರಾಹಿಂ ಅವರು ಹೆಣ್ಣು ಕೇವಲ ಲೈಂಗಿಕ ತೃಷೆಯನ್ನು ತೀರಿಸಲು ಇರುವ, ಭಾವನೆಗಳು, ಸ್ವಂತ ವ್ಯಕ್ತಿತ್ವ ಇಲ್ಲದ ಒಂದು ಪ್ರಾಣಿ ಎಂದು ಬಿಂಬಿಸುವ ಮೂಲಕ ಮಹಿಳಾ ಸಮುದಾಯಕ್ಕೆ ಘೋರ ಅವಮಾನ ಮಾಡಿದ್ದಾರೆ ಎಂದರು.
ತ್ರಿವಳಿ ತಲಾಖ್ ಪದ್ಧತಿಯಿಂದ ಅದೆಷ್ಟೊ ಮುಸ್ಲಿಂ ಮಹಿಳೆಯರು, ಮಕ್ಕಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ಎನ್ನುವುದು ಶಾಯಾರಾ ಬಾನು, ಜೈಪುರದ ಅಪ್ತಿನ್ ರೆಹಮಾನ್, ಪುಣೆಯ ಪರ್ಷಿಯಾ ಬಾಗ್ವಾನ್ ಅವರ ನೋವಿನ ಕಥೆಯಿಂದ ತಿಳಿದುಬರುತ್ತದೆ. ಇವರೆಲ್ಲಾ ಇಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ದೇಶದ 7 ವಿವಿಧ ಮಹಿಳಾ ಸಂಘಟನೆಗಳು ತಾವಾಗಿಯೇ ಇಂದು ಮಧ್ಯಪ್ರವೇಶಿಸಿರುವುದು ಕಂಡಾಗ ಸಮಸ್ಯೆಯ ತೀವ್ರತೆಯ ಅರಿವಾಗುತ್ತದೆ ಎಂದವರು ಹೇಳಿದರು.ಈ ಸಂದರ್ಭ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಮಹಿಳಾ ಮೊರ್ಚಾದ ಅಧ್ಯಕ್ಷೆ ಪೂಜಾ ಪೈ, ಪದಾಧಿಕಾರಿಗಳಾದ ಪ್ರಭಾಮಾಲಿನಿ, ಧನ್ಯವತಿ, ನಮಿತಾ ಶ್ಯಾಂ, ಮಂಜುಳಾ, ಸಂಧ್ಯಾ ವೆಂಕಟೇಶ್, ಬಿಜೆಪಿ ಜಿಲ್ಲಾ ವಕ್ತಾರರಾದ ವಿಕಾಸ್ ಪುತ್ತೂರು, ಜಿತೇಂದ್ರ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.