ಮಂಗಳೂರು: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಯಲ್ಲಿ ಅ. 4 ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ದರೋಡೆ ಕೃತ್ಯಕ್ಕೆ ಬಳಸಿದ ಪಿಸ್ತೂಲು, ರಿವಾಲ್ವರ್ ಮತ್ತು ಮಾರಕಾಸ್ತ್ರಗಳನ್ನು ಹಾಗೂ ದರೋಡೆಗೈದ ಸೊತ್ತುಗಳ ಪೈಕಿ 455 ಗ್ರಾಂ ಚಿನ್ನ ಮತ್ತು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ. ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಭಂಡಾರಿಬೆಟ್ಟು ಬೈಲು ಮನೆಯ ಭರತ್ ಶೆಟ್ಟಿ (30), ಬಂಟ್ವಾಳ ತಾಲೂಕು ಮೇಲ್ಕಾರ್ನ ಮೊಹಮದ್ ಅಲಿ (35), ಮಂಗಳೂರು ತಾಲೂಕು ಪಾವಂಜೆಯ ಪುರುಷೋತ್ತಮ (44) ಮತ್ತು ಸೋಮೇಶ್ವರ ಉಚ್ಚಿಲದ ಹರೀಶ್ ಗಟ್ಟಿ (41) ಬಂಧಿತರು.
ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 11 ಕ್ಕೇರಿದೆ. ಅ. 17 ರಂದು ಕಟೀಲು ದೇವಸ್ಥಾನದ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಅಡ್ಯನಡ್ಕ ಸುರೇಶ್ ಕುಮಾರ್, ಪ್ರಮುಖ ಆರೋಪಿ ಮಂಗಳೂರು ಬಿಜೈ ಕಾಪಿಕಾಡ್ನ ಸುಧೀಂದ್ರ ರಾವ್ ಎಚ್.ಕೆ. ಯಾನೆ ಸುಧೀಂದ್ರ ಯಾನೆ ಸುಶೀಂದ್ರ ರಾವ್, ತೆಂಕ ಎಕ್ಕಾರು ಗ್ರಾಮದ ಚಿದಾನಂದ, ಎಕ್ಕಾರಿನ ಸೂರಜ್ ಕುಮಾರ್, ತೆಂಕ ಎಕ್ಕಾರು ಗ್ರಾಮ ದುರ್ಗಾ ನಗರದ ಸದಾಶಿವ ಶೆಟ್ಟಿ (49) ಸಹಿತ 5 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ ಕದ್ದ ಚಿನ್ನಾಭರಣ ಮಾರಾಟ ಮಾಡಿ ಲಭಿಸಿದ 4,25,000 ರೂ. ನಗದು, 3 ಗ್ರಾಂ 910 ಮಿಲಿ ಗ್ರಾಂ ತೂಕದ ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವರ ಭಾವಚಿತ್ರವಿರುವ ಪೆಂಡೆಂಟ್, 5 ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಐ- 20 ಕಾರನ್ನು ವಶ ಪಡಿಸಿಕೊಳ್ಳಲಾಗಿತ್ತು.ಆ ಬಳಿಕ ಅ. 23 ರಂದು ಪುತ್ತೂರು ತಾಲೂಕು ಬನ್ನೂರಿನ ಚಂದ್ರಹಾಸ ಹಾಗೂ ಅ. 25 ರಂದು ಬೆಳ್ತಂಗಡಿ ಪಟ್ರಮೆಯ ಒ.ಟಿ. ಲಿಜೊ ಅವರನ್ನು ದಸ್ತಗಿರಿ ಮಾಡಲಾಗಿತ್ತು.
ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರು ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.