ಮಂಗಳೂರು: ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಬರುವ ಬೇಸಗೆಯಲ್ಲಿ ಸಂಭಾವ್ಯ ಕುಡಿಯುವ ನೀರಿನ ಕೊರತೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ತುಂಬೆ ವೆಂಟೆಡ್ ಡ್ಯಾಂ, ಜಲವಿದ್ಯುತ್ ಯೋಜನೆ ಡ್ಯಾಂಗಳು ಹಾಗೂ ಕಿಂಡಿ ಅಣೆಕಟ್ಟುಗಳಲ್ಲಿ ಡಿಸೆಂಬರ್ನೊಳಗೆ ಗರಿಷ್ಠ ನೀರು ಸಂಗ್ರಹ ಮಾಡುವಂತೆ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಸೂಚಿಸಿದ್ದಾರೆ.
ಕಳೆದ ಬೇಸಗೆಯಲ್ಲಿ ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯಾದ್ಯಂತ ಎದುರಾದ ಕುಡಿಯುವ ನೀರಿನ ತೀವ್ರ ಸಮಸ್ಯೆಯ ಹಿನ್ನೆಲೆಯಲ್ಲಿ ಈ ವರ್ಷ ಮುಂಜಾಗರೂಕತೆ ಕ್ರಮಗಳ ಬಗ್ಗೆ ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರಗಿದ ಮನಪಾ, ನಗರಾಡಳಿತ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳು, ಪ್ರಮುಖ ಕೈಗಾರಿಕೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಡಿಸೆಂಬರ್ ತಿಂಗಳ 10ರೊಳಗೆ ಎಲ್ಲ ಖಾಸಗಿ ಅಣೆಕಟ್ಟುಗಳು ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹ ಮಾಡಬೇಕು. ಸಂಗ್ರಹವಾದ ನೀರಿನಲ್ಲಿ ಖಾಸಗಿ ಕಂಪೆನಿಗಳು ವಿದ್ಯುತ್ ಉತ್ಪಾದನೆ ಮಾಡುವುದಾದಲ್ಲಿ ಜಿಲ್ಲಾಡಳಿತದ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು. ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ಗಳು ಈ ಬಗ್ಗೆ ನಿಗಾ ವಹಿಸಬೇಕು. ಗರಿಷ್ಠ ನೀರು ಸಂಗ್ರಹವಾದ ಬಳಿಕವೂ ಒಳ ಹರಿವು ಇದಲ್ಲಿ ಮಾತ್ರವೇ ಕಂಪೆನಿಗಳು ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ ಎಂದು ಸೂಚಿಸಿದರು.