ಮಂಗಳೂರು: ಮಂಗಳೂರಿನಲ್ಲಿ ಸುಸಜ್ಜಿತ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಹಿತ ಟ್ರಾನ್ಸ್ಪೋರ್ಟ್ ಹಬ್ ಸ್ಥಾಪನೆಗೆ ಸಾರಿಗೆ ಇಲಾಖೆ ಸಿದ್ದವಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಸೂಕ್ತ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನರ್ಮ್ ಯೋಜನೆಯಡಿ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ವತಿಯಿಂದ ನಗರ ಸಾರಿಗೆ ಬಸ್ಗಳ ನಿರ್ವಹಣೆಗಾಗಿ ನಗರದ ಕುಂಟಿಕಾನದ 2 ಎಕರೆ ವಿಸ್ತೀರ್ಣದಲ್ಲಿ 5.93 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಂಗಳೂರು ನಗರದ ನೂತನ ನರ್ಮ್ ಬಸ್ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಜೆ.ಆರ್.ಲೋಬೋ ನೀಡಿದ ಸಲಹೆಯಂತೆ ಪಂಪ್ವೆಲ್ನಲ್ಲಿ ಟ್ರಾನ್ಸ್ಪೋರ್ಟ್ ಹಬ್ ನಿರ್ಮಾಣಕ್ಕೆ ನಾವು ಈ ವರ್ಷವೇ ಸಿದ್ದರಿದ್ದೇವೆ. ಸರಕಾರಿ ಸ್ಥಳವಿದ್ದರೆ ಅದನ್ನು ಪರಿಗಣಿಸಿ ಇಲ್ಲದಿದ್ದರೆ ಖಾಸಗಿ ಭೂಮಿ ಪಡೆದು ಅದರ ಪೂರ್ಣ ಪರಿಶೀಲನೆಯನ್ನು ನಮ್ಮ ಅಧಿಕಾರಿಗಳು ನಡೆಸಲಿದ್ದಾರೆ. ಮೊದಲಿಗೆ ಸೂಕ್ತ ಸ್ಥಳ ಆಯ್ಕೆ ನಡೆಯಬೇಕಿದೆ ಎಂದರು.ಈ ಸಂದರ್ಭ ಸಚಿವ ಬಿ. ರಮಾನಾಥ ರೈ, ಶಾಸಕ ಜೆ.ಆರ್. ಲೋಬೋ, ಶಾಸಕಿ ಶಕುಂತಳಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.