ಮಂಗಳೂರು: ದ.ಕ.ಜಿಲ್ಲೆಯ ಪುತ್ತೂರು ತಾಲೂಕು ಪೆರಿಗೇರಿ ಪಾದೆಕರಿಯ ವಿಷ್ಣು ಭಟ್ ಅವರ ಮನೆಯಲ್ಲಿ ಅ. 25ರಂದು ಹಾಡಹಗಲೇ ಮನೆ ಮಂದಿಯನ್ನು ಕಟ್ಟಿ ಹಾಕಿ ದರೋಡೆ ಮಾಡಿದ ತಂಡದ 12 ಮಂದಿಯಲ್ಲಿ 10 ಮಂದಿಯನ್ನು ಡಿಸಿಐಬಿ ಮತ್ತು ಪುತ್ತೂರು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ರಾವ್ ಬೋರಸೆ ಅವರು ರವಿವಾರ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು .ಅವರು ದರೋಡೆ ಮಾಡಿದ ಸೊತ್ತು, ದರೋಡೆಗೆ ಉಪಯೋಗಿಸಿದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃಷ್ಣಾಪುರ 8 ನೇ ಬ್ಲಾಕ್ ಗೋಪುರೊಟ್ಟು ಮನೆಯ ಕೃಷ್ಣ ಶೆಟ್ಟಿ (35), ಸುರತ್ಕಲ್ ಸೂರಿಂಜೆ ಗ್ರಾಮ ಮದ್ಯ ಕುಲ್ಲಂಗಲ್ ಗುಡ್ಡೆಯ ಮಿಲನ್ ಯಾನೆ ಧನುಷ್ (24), ಕೃಷ್ಣಾಪುರ 8 ನೆ ಬ್ಲಾಕ್ನ ರೂಪೇಶ್ ಕುಮಾರ್ ಯಾನೆ ರೂಪಿ, ಕಾಟಿಪಳ್ಳದ ಮಿಲ್ಟನ್ ಆಲ್ವಿನ್ ಪಿಂಟೊ (24), ಸುರತ್ಕಲ್ ಇಡ್ಯಾ ಗ್ರಾಮದ ಆಶ್ರಯ ಕಾಲನಿಯ ಭರತ್ (19), ಮದ್ಯ ಕುಲ್ಲಂಗಲ್ ಗುಡ್ಡೆಯ ರಾಖೀ ಯಾನೆ ರಾಖೇಶ್ (19), ಕೃಷ್ಣಾಪುರ 8 ಎ ಬ್ಲಾಕ್ನ ರತನ್ ಯಾನೆ ರತನ್ ರಾಜ್ (25), ಪೆರಾಬೆ ಗ್ರಾಮದ ಸುರೇಶ ಆಚಾರ್ಯ (34), ಸುಳ್ಯ ತಾಲೂಕು ಐವರ್ನಾಡು ಜಬಳ ಮನೆಯ ಪ್ರವೀಣ್ ಕುಮಾರ್ (23), ಪುತ್ತೂರು ಪಡವಗನ್ನೂರು ಗ್ರಾಮ ಪುಲಿಚಾjಡಿಯ ಶಬರಿ ಕುಮಾರ ನಾಯ್ಕ ಯಾನೆ ವಿಜಯ್ ಕುಮಾರ್ (24) ಬಂಧಿತರು. ರೂಪೇಶ್ ಕುಮಾರ್ ಮೇಲೆ ಸುರತ್ಕಲ್ ಠಾಣೆಯಲ್ಲಿ 1 ಹಲ್ಲೆ ಪ್ರಕರಣ, ಮಿಲ್ಟನ್ ಆಲ್ವಿನ್ ಪಿಂಟೊ ಮತ್ತು ರತನ್ ರಾಜ್ ಅವರ ಮೇಲೆ ಸುರತ್ಕಲ್ ಠಾಣೆಯಲ್ಲಿ ತಲಾ 3 ಹಲ್ಲೆ ಪ್ರಕರಣಗಳಿವೆ. ಇನ್ನಿಬ್ಬರು ಆರೋಪಿಗಳಾದ ಸುರತ್ಕಲ್ ಕಾಟಿಪಳ್ಳದ ಯಶೋಧರ ಶೆಟ್ಟಿ ಯಾನೆ ಯಶು (38) ಮತ್ತು ತೋಕೂರು ಜೋಕಟ್ಟೆಯ ನಾಗೇಶ್ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ. . ಅಡಿಶನಲ್ ಎಸ್ಪಿ ಡಾ | ವೇದ ಮೂರ್ತಿ, ಡಿಸಿಬಿಐ ಇನ್ಸ್ಪೆಕ್ಟರ್ ಅಮಾನುಲ್ಲಾ ಮುಂತಾದವರು ಉಪಸ್ಥಿತರಿದ್ದರು.
ಘಟನೆ ಹಿನ್ನೆಲೆ:
ವಿಷ್ಣು ಭಟ್ ಅವರ ಮನೆಗೆ ಅ. 25ರಂದು ಮಧ್ಯಾಹ್ನ 9 ಮಂದಿ ಆರೋಪಿಗಳು ನುಗ್ಗಿ ವಿಷ್ಣು ಭಟ್ ಅವರ ಪತ್ನಿ ಮತ್ತು ಕೆಲಸದಾಳನ್ನು ಕಟ್ಟಿಹಾಕಿ ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ದರೋಡೆ ಮಾಡಿಕೊಂಡು ಹೋಗಿದ್ದರು.ಪ್ರಕರಣದ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರ ಮಾರ್ಗದರ್ಶನ ಮತ್ತು ಸಹಕಾರದಿಂದ ಆರೋಪಿಗಳ ಪತ್ತೆ ಕಾರ್ಯ ಸಾಧ್ಯವಾಗಿದೆ ಎಂದು ಎಸ್ಪಿ ವಿವರಿಸಿದರು. ಬಂಧಿತ ಆರೋಪಿಗಳಿಂದ 50,000 ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣ, 7 ಲಕ್ಷ ರೂ. ಮೌಲ್ಯದ ಕ್ಸೈಲೋ ಕಾರು, 3.5 ಲಕ್ಷ ರೂ. ಮೌಲ್ಯದ ಮಾರುತಿ ಆಲ್ಟೊ ಕಾರು, ನಾಲ್ಕು ಮೊಬೈಲ್ ಫೋನ್ ಸಹಿತ ಒಟ್ಟು 11 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನೂ 2 ಉಂಗುರ, 2 ಕಿವಿಯೋಲೆ ಮತ್ತು ನಗದು ಪತ್ತೆಯಾಗಲು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.