ಮುಂಬಯಿ, ನ.15: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿ.ಎಸ್.ಕೆ.ಬಿ ಅಸೋಸಿಯೇಶನ್ ಸಹಯೋಗದಲ್ಲಿ ಗೋಕುಲದಲ್ಲಿ ಕಾರ್ತಿಕ ಮಾಸದ ತುಳಸಿ ಪೂಜೆಯ ಅಂಗವಾಗಿ ಬಲಿ ಪಾಡ್ಯದಿಂದ ಉತ್ಥಾನದ್ವಾದಶಿಯವರೆಗೆ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ, ತುಳಸಿ ಪೂಜೆ ಹಾಗೂ ಸಂಕೀರ್ತನೆ ಜರಗಿತು.
ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕ ಹಾಗೂ ಪೌರಾಣಿಕ ಮಹತ್ವವುಳ್ಳ ಶ್ರೀಕೃಷ್ಣ ತುಳಸೀ ವಿವಾಹವನ್ನು ಉತ್ಥಾನ ದ್ವಾದಶಿಯಂದು ಪುಷ್ಪಹಾರ ಹಾಗೂ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ತುಳಸೀ ವೃಂದಾವನದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ನಿತ್ಯಪೂಜೆಯ ನಂತರ ಶ್ರೀ ಹರಿ ಭಟ್ ಪರಿವಾರದವರ ಪ್ರಾಯೋಜಕ ತ್ವದಲ್ಲಿ ತುಳಸೀ ಪೂಜೆ, ಗೋಪೂಜೆ ನೆರವೇರಿತು.
ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರಾಜೆಕ್ಟ್ ನಲ್ಲಿ ನೋಂದಣಿಯಾದ ಗೋಕುಲ ಭಜನಾ ಮಂಡಳಿಯವರು, ತಮ್ಮ 150 ಭಜನಾ ಕಾರ್ಯಕ್ರಮಗಳು ಪೂರೈಸಿದ ನಿಮಿತ್ತ, ಈ ಬಾರಿ ವಿಶೇಷವಾಗಿ,ಶ್ರೀ ದೇವರ ಸನ್ನಿಧಿಯಲ್ಲಿ, ಮಂದಿರದ ಅರ್ಚಕರಾದ ಶ್ರೀ ಹರಿ ಭಟ್ ರವರ ನೇತೃತ್ವದಲ್ಲಿ 108 ಬಾರಿ ವಿಷ್ಣು ಸಹಸ್ರನಾಮ ಪುಷ್ಪಾರ್ಚನೆ ಗೈದರು. ಶ್ರೀ ದೇವರಿಗೆ ಮಹಾಪೂಜೆಯಾದ ಬಳಿಕ ತೀರ್ಥ ಪ್ರಸಾದ ವಿತರಣೆ ನೆರವೇರಿತು. ಹರಿ ಭಟ್,ವಾಣಿ ಭಟ್ ಮತ್ತು ಎ ಜಿ ರಾವ್ ದಿನದ ವೆಚ್ಚವನ್ನು ವಹಿಸಿದ್ದರು.
ನಂತರ ತಾರಾ ರಾವ್, ಪ್ರೇಮಾ ರಾವ್ ಹಾಗೂ ಸಹನಾ ಪೆÇೀತಿಯವರ ನೇತೃತ್ವದಲ್ಲಿ ದಾಸರ ಪದಗಳ ಆಧಾರಿತ ಅಂತ್ಯಾಕ್ಷರಿ, ರಸ ಪ್ರಶ್ನೆ ಸ್ಪರ್ಧೆ ಹಾಗೂ ನೃತ್ಯ ಕಾರ್ಯಕ್ರಮ ನೆರವೇರಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ಹಾಗೂ ಕೋಶಾಧಿಕಾರಿ ಹರಿದಾಸ್ ಭಟ್ ಬಹುಮಾನ ವಿತರಿಸಿದರು.
ಸಂಜೆ ಗೋಕುಲ ಕಲಾವೃಂದ ಭಜನಾ ಮಂಡಳಿಯವರಿಂದ ಭಜನೆ ನೆರವೇರಿತು. ಪ್ರತಿದಿನದ ಭಜನೆಯಲ್ಲಿಯೂ ಜನಾರ್ದನ್ ಸಾಲಿಯಾನ್ ತಬಲಾದಲ್ಲಿಸಹಕರಿಸಿದರು.
ಶ್ರೀ ಕೃಷ್ಣ ಮಂದಿರದಲ್ಲಿ ರಾತ್ರಿ ಪೂಜೆ ಜರಗಿದ ಬಳಿಕ ಶ್ರೀ ಕೃಷ್ಣ ತುಳಸೀ ವಿವಾಹ, ಕ್ಷೀರಾಬ್ಧಿ ಮಹೋತ್ಸವವು ಮಂದಿರದ ಅರ್ಚಕ ಹರಿ ಭಟ್ ಮತ್ತುಕೃಷ್ಣರಾಜ್ ಉಪಾಧ್ಯಾಯರವರ ನೇತೃತ್ವದಲ್ಲಿ ಅತ್ಯಂತ ವೈಭವದಿಂದ ನೆರವೇರಿತು. ತದನಂತರ ಅರ್ಚಕವರ್ಗ ಹಾಗೂ ಸದಸ್ಯರಿಂದ ಸಾಂಪ್ರದಾಯಿಕ ತುಳಸೀ ಸಂಕೀರ್ತನೆ ನೆರವೇರಿತು. ಅಧ್ಯಕ್ಷರಾದ ಡಾ| ಸುರೇಶ್ ರಾವ್ ದಂಪತಿ ತುಳಸೀ ವಿವಾಹದ ಮಹಾ ಪ್ರಾಯೋಜಕರಾಗಿದ್ದರು. ಪ್ರತಿ ವರ್ಷದಂತೆ ಮೈಸೂರ್ ಬೋರ್ಡಿಂಗ್ ಮಾಲಕರಾದ ರಮೇಶ್ ಶೆಟ್ಟಿಯವರು ಲಡ್ಡು ಪ್ರಸಾದದ ಪ್ರಾಯೋಜಕರಾಗಿದ್ದರು. ಅತ್ಯಂತ ವೈಭವದಿಂದ ಜರಗಿದ ಉತ್ಸವಕ್ಕೆ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ಟ್ರಸ್ಟಿಗಳು, ಬಿ.ಎಸ್.ಕೆ.ಬಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯ ಬಾಂಧವರು ಮಾತ್ರವಲ್ಲದೆ ಪರಿಸರದ ಶ್ರೀಕೃಷ್ಣನ ಭಕ್ತಾದಿಗಳೆಲ್ಲಾ ಉಪಸ್ಥಿತರಿದ್ದು ಶ್ರೀ ಕೃಷ್ಣ ತುಳಸೀ ದೇವಿಯ ಅನುಗ್ರಹಕ್ಕೆ ಪಾತ್ರರಾದರು. ಸುಮಾರು 300ಕ್ಕೂ ಮಿಕ್ಕಿದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು