ಮಂಗಳೂರು: ಮಂಗಳೂರು ನಗರದ ಎಸ್.ಆರ್. ಶೆಟ್ಟಿ ಎಂಬವರ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ, ಮೊಬೈಲ್, ವಾಚ್, ಮತ್ತಿತರ ಸಾಮಾಗ್ರಿಗಳನ್ನು ಕಳವುಗೈದ ಘಟನೆ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಕಳ್ಳರು ಮನೆಯ ಕಪಾಟಿನೊಳಗಿಟ್ಟಿದ್ದ ೪ ಪವನ್ ತೂಕದ ಮುತ್ತಿನ ಪೆಂಡೆಂಟ್, ೩ ಪವನ್ ತೂಕದ ೧ ಸರ ಇತ್ಯಾದಿ ಕಳವುಗೈದಿದ್ದಾರೆ. ಇವುಗಳ ಮೌಲ್ಯ ೩.೭೦ ಲಕ್ಷ ರೂಪಾಯಿ ಆಗಿದೆ ಎಂದು ಅಂದಾಜಿಸಲಾಗಿದೆ. ಎಸ್.ಆರ್ . ಶೆಟ್ಟಿಯವರು ತನ್ನ ಮನೆಯ ನವೀಕರಣ ಕಾಮಗಾರಿ ನಡೆಸುತ್ತಿದ್ದಾರೆ.
ಹಾಗಾಗಿ ಅವರು ಅರ್ಕುಳದಲ್ಲಿರುವ ತನ್ನ ಫಾರ್ಮ್ ಹೌಸ್ ನಲ್ಲಿ ನೆಲೆಸಿದ್ದು, ವಾರದಲ್ಲಿ ಎರಡು ಬಾರಿ ನವೀಕರಣಗೊಳ್ಳುತ್ತಿರುವ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಸೋಮವಾರ ಮನೆಗೆ ಬಂದಾಗ ಹಿಂಬಾಗಿಲು ಮುರಿದಿರೋದು ಗಮನಕ್ಕೆ ಬಂದಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.