ಕುಂದಾಪುರ: ಬೆಳೆಯುತ್ತಿರುವ ಕೋಟೇಶ್ವರ ನಗರದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉಜ್ವಲ ಅವಕಾಶವಿದೆ. ಕೃಷಿ, ಹೈನುಗಾರಿಕೆ, ಕೈಗಾರಿಕೆಗಳಂತಹ ಬಹು ಉದ್ಯಮಗಳ ಈ ಪ್ರದೇಶದಲ್ಲಿ ಆರ್ಥಿಕ ಸಂಸ್ಥೆಗಳ ಅಗತ್ಯವೂ ಇದೆ. ವ್ಯವಹಾರದಲ್ಲಿ ಪ್ರಾಮಾಣಿಕತೆ ಕಾಯ್ದುಕೊಂಡರೆ ಆರ್ಥಿಕ ಸಂಸ್ಥೆಗಳು ಇಲ್ಲಿ ಯಶಸ್ವಿಯಾಗಬಹುದು ಎಂದು ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಾಲಯದ ಆಡಳಿತ ಧರ್ಮದರ್ಶಿ ಶ್ರೀಧರ ಕಾಮತ್ ಹೇಳಿದರು.
ಕೋಟೇಶ್ವರದಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಬೀರೇಶ್ವರ ಕೊ-ಆಪರೇಟೀವ್ ಕ್ರೆಡಿಟ್ ಸೊಸೈಟಿಯ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಶುಭ ಹಾರೈಸಿದರು.
ಸೊಸೈಟಿಯ ಹಣಕಾಸು ವ್ಯವಹಾರಕ್ಕೆ ಚಾಲನೆ ನೀಡಿದ ಉದ್ಯಮಿ ದಿನೇಶ್ ಕಾಮತ್ ಮಾತನಾಡಿ, ಪರಿಸರದ ಯುವ ಉದ್ಯಮಿಗಳಿಗೆ ಸೊಸೈಟಿಯು ಪ್ರೋತ್ಸಾಹ ನೀಡಲಿ ಎಂದು ಆಶಿಸಿದರು.
ಬೀಜಾಡಿ ಗ್ರಾಮಪಂಚಾಯತ್ ಸದಸ್ಯ ರವೀಂದ್ರ ದೊಡ್ಮನೆ, ಪತ್ರಕರ್ತ ಕೆ.ಜಿ ವೈದ್ಯ, ಉದ್ಯಮಿ ಕಿಶೋರ್ ಶುಭ ಹಾರೈಸಿದರು.
ಕಟ್ಟಡ ಮಾಲೀಕ ರಾಘವೇಂದ್ರ ಪೈಯವರನ್ನು ಸನ್ಮಾನಿಸಲಾಯಿತು. ಸಿಂಡಿಕೇಟ್ ಬ್ಯಾಂಕ್ ಕೋಟೇಶ್ವರ ಶಾಖಾ ವ್ಯವಸ್ಥಾಪಕಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.
ಸೊಸೈಟಿ ಶಾಖಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಸ್ವಾಗತಿಸಿದರು. ಸಿಬ್ಬಂದಿ ಸಚಿನ್ ಪೈ ಪ್ರಾಸ್ತಾವಿಕ ಮಾತನಾಡಿ, ಬೀರೇಶ್ವರ ಸೊಸೈಟಿ ಬೆಳಗಾವಿಯ ಯಕ್ಸಂಬಾದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಬಹುರಾಜ್ಯಗಳಲ್ಲಿ ನೂರಮೂವತ್ತೆರಡಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಜೊಲ್ಲೆ ಸಮೂಹ ಪ್ರವರ್ತಿತ ಸೊಸೈಟಿಯು ಗ್ರಾಹಕರಿಗೆ ಠೇವಣಿ ಮತ್ತು ಸಾಲಗಳ ನೆರವಲ್ಲದೆ, ಇತರ ಬಹುಮುಖ ಸೇವೆಗಳನ್ನು ಒದಗಿಸುತ್ತದೆ ಎಂಬ ವಿವರ ನೀಡಿದರು. ಸಿಬ್ಬಂದಿಗಳಾದ ಸೌಜನ್ಯ, ಕುಮಾರ್ ನಾಯಕ್, ಆನಂದ ಕಟ್ಟೆಗಾರ್ ವiತ್ತು ವಿಘ್ನೇಶ್ ಅತಿಥಿಗಳನ್ನು ಗೌರವಿಸಿದರು.