ಮಂಗಳೂರು: ದ.ಕ.ಜಿಲ್ಲೆಯ ವಿಟ್ಲದ ಜನರಿಗೆ ಚಿಟ್ ಫಂಡ್ ಹಾಗೂ ವಿವಿಧ ಆಮಿಷಗಳನ್ನು ಒಡ್ಡಿ ಮೂರು ಕೋಟಿಗಿಂತಲೂ ಮಿಕ್ಕಿ ರೂಪಾಯಿ ಪಂಗನಾಮ ಹಾಕಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದಾರೆ.
ವಿಟ್ಲ ಪಟ್ಟಣ ಪಂಚಾಯತ್ ೧೦ನೇ ವಾರ್ಡ್ ಸದಸ್ಯೆಯ ಪತಿ ಪುರಂದರ ಸೇರಾಜೆ(೩೯) ಎಂಬಾತನೇ ಪೊಲೀಸರ ಅತಿಥಿಯಾದವ. ಕಳೆದ ೫ ವರ್ಷದಿಂದ ೫.೨೫ ಲಕ್ಷದ ಒಂದು, ೩.೬೦ ಲಕ್ಷದ ಎರಡು, ೨ ಲಕ್ಷದ ಎರಡು, ೧ ಲಕ್ಷದ ಎರಡು, ೬೦ ಸಾವಿರದ ಒಂದು ಚಿಟ್ ಫಂಡನ್ನು ಸುಮಾರು ೩೫ ಮಂದಿಯ ಹೆಸರಿನಲ್ಲಿ ನಡೆಸಿಕೊಂಡು ಬಂದಿದ್ದಾರೆನ್ನಲಾಗಿದೆ. ಇದರಲ್ಲಿ ಕೆಲವರಿಗೆ ಹಣ ಸಿಗದೆ ವಂಚನೆಗೊಳಗಾಗಿದ್ದರು.
ಈ ಬಗ್ಗೆ ಜನರು ಹಣಕ್ಕಾಗಿ ಈತನ ಹಿಂದೆ ಬಿದ್ದಿದ್ದರು. ಕೆಲವು ಸಮಯದಿಂದ ನಾಗರಿಕರ ಮುಂದೆ ಕಾಣಿಸಿಕೊಳ್ಳದ ಈತ ತಲೆಮರೆಸಿಕೊಂಡು ಓಡಾಡುತ್ತಿದ್ದ ಗುರುವಾರ ಬೊಬ್ಬೆಕೇರಿಯಲ್ಲಿರುವ ತಮ್ಮ ಹೋಟೆಲ್ ನಿಂದ ವಸ್ತುಗಳನ್ನು ಸಾಗಾಟ ಮಾಡಲು ಯತ್ನಿಸಿದಾಗ ನಾಗರಿಕರು ಗಮನಿಸಿ ಹಿಡಿದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.