ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಬಸ್ಸುಗಳ ಮೀಸಲು ಸೀಟುಗಳಲ್ಲಿ ಇತರರು ಕುಳಿತು ಪ್ರಯಾಣಿಸುವುದು, ಬಸ್ಸುಗಳನ್ನು ಎಲ್ಲೆಂದರಲ್ಲಿ ರಸ್ತೆ ಮಧ್ಯೆ ನಿಲ್ಲಿಸುವುದು, ಮೀನಿನ ಲಾರಿಗಳಿಂದ ಪರಿಸರ ಮಾಲಿನ್ಯ ಇವೇ ಮೊದಲಾದ ದೂರುಗಳು ಸಾರ್ವಜನಿಕರಿಂದ ಕೇಳಿ ಬಂತು. ಬಸ್ಸುಗಳಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲರಿಗೆ ಮೀಸಲಿರಿಸಿದ ಸೀಟುಗಳಲ್ಲಿ ಇತರರು ಕುಳಿತು ಪ್ರಯಾಣಿಸುತ್ತಿದ್ದು, ಈ ಬಗ್ಗೆ ಬಸ್ ಕಂಡಕ್ಟರ್ಗೆ ತಿಳಿಸಿದರೆ 'ನಿಮಗೆ ಕುಳಿತುಕೊಂಡೇ ಹೋಗಬೇಕಿದ್ದರೆ ರಿಕ್ಷಾದಲ್ಲಿ ಹೋಗಿ' ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಮೀಸಲು ಸೀಟುಗಳಲ್ಲಿ ಇತರರು ಕುಳಿತು ಪ್ರಯಾಣಿಸುವುದರಿಂದ ನಿಯಮ ಉಲ್ಲಂಘನೆಯಾಗುತ್ತದೆ ಎಂದು ಇಬ್ಬರು ಹಿರಿಯ ನಾಗರಿಕರು ತಮ್ಮ ಸಮಸ್ಯೆಯನ್ನು ತೋಡಿಕೊಂಡರು.
ಹಳೆ ಬಂದರಿನಿಂದ ಹೊರಡುವ ಮೀನಿನ ಲಾರಿಗಳು ಕಲುಷಿತ ನೀರನ್ನು ರಸ್ತೆಯ ಮೇಲೆ ಚೆಲ್ಲುತ್ತಾ ಪರಿಸರ ಮಾಲಿನ್ಯ ಉಂಟು ಮಾಡುತ್ತಿವೆ ಎಂದು ಒಬ್ಬರು ಆರೋಪಿಸಿದರು. ಕೆಲವು ಸಿಟಿ ಬಸ್ಸುಗಳು ಕೆಲವು ಬಸ್ ತಂಗುದಾಣಗಳಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಾ ಕಾಲಹರಣ ಮಾಡಿ ಬಳಿಕ ಅತಿ ವೇಗವಾಗಿ ಚಲಿಸುತ್ತವೆ. ಇದರಿಂದ ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗುತ್ತದೆ. ಹೀಗೆ ಮಾರ್ಗ ಮಧ್ಯೆ ತಂಗುದಾಣಗಳಲ್ಲಿ ನಿಲ್ಲುವ ಬದಲು ಬಸ್ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಹೊರಟು ನಿಗದಿತ ಸಮಯದಲ್ಲಿ ಗುರಿ ತಲುಪುವಂತೆ ವ್ಯವಸ್ಥೆಯಾಗಬೇಕು ಎಂಬ ಸಲಹೆ ಕೇಳಿ ಬಂತು.