ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೨೧೮ ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಮೊಯಿದ್ದೀನ್ ಬಾವಾ ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ವ್ಯವಸ್ಥೆಗೆ ಎಡಿಬಿಯಿಂದ ನೀಡಲಾಗುತ್ತಿದ್ದ ೧೬೦ ಕೋಟಿ ರೂಪಾಯಿ ಅನುದಾನವನ್ನು ಪರಿಷ್ಕರಿಸಿ ೨೧೮ ಕೋಟಿ ರೂಪಾಯಿ ನೀಡಲು ಆದೇಶವಾಗಿದೆ. ಒಳಚರಂಡಿ ವ್ಯವಸ್ಥೆಗೆ ನೀಡಲಾಗುತ್ತಿದ್ದ ೧೨೦ ಕೋಟಿ ರೂಪಾಯಿ ಅನುದಾನವನ್ನು ೧೯೫ ಕೋಟಿ ರೂಪಾಯಿಗೆ ಪರಿಷ್ಕರಿಸಲಾಗಿದೆ. ಡ್ರೈನೇಜ್ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಹಾಗೂ ಡ್ರೈನೇಜ್ ಇನ್ನೂ ಜಾರಿಯಾಗದ ಪ್ರದೇಶಗಳಲ್ಲಿ ಸರ್ವೆ ಕಾರ್ಯ ನಡೆಸಿ ಮಂಜೂರಾಗಿರುವ ೧೯೫ ಕೋಟಿ ರೂಪಾಯಿ ಅನುದಾನವನ್ನು ವಿನಿಯೋಗಿಸಲಾಗುವುದು ಎಂದವರು ಹೇಳಿದ್ರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಹರಿನಾಥ್, ಕಾರ್ಪೋರೇಟರ್ ಗಳಾದ ಶಶಿಧರ್ ಹೆಗ್ಡೆ, ಮುಹಮ್ಮದ್ ಕುಂಜತ್ ಬೈಲ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.