ಮಂಗಳೂರು: ಪವಿತ್ರ ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಶನಿವಾರದಿಂದ ಆರಂಭಗೊಂಡಿದೆ. ಗೋವು ಆಹಾರ ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆಯನ್ನ ಸಲ್ಲಿಸಿದರು. ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ವೆ.ಮೂ. ವಿಜಯಕುಮಾರ್ ಅವರು ಎಡೆಸ್ನಾನದ ಕುರಿತು ಮಾರ್ಗದರ್ಶನ ನೀಡಿದರು.
ಅದರಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ ೪೩೨ ಬಾಳೆಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇಧ್ಯವನ್ನು ಹಾಕಲಾಯಿತು. ಬಳಿಕ ದೇವಳದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು. ಹಸುಗಳು ತಿಂದ ಅನ್ನಪ್ರಸಾದದ ಮೇಲೆ ಉರುಳು ಸೇವೆ ನಡೆಯಿತು.
ಎಡೆಸ್ನಾನ ಸಂದರ್ಭ ಕ್ಷೇತ್ರದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.ನ್ಯಾಯಾಲಯದ ಮೆಟ್ಟಲೇರಿದ್ದ ಮಡೆಮಡೆಸ್ನಾನ ಹರಕೆ ಸೇವೆಯು ಎಡೆಸ್ನಾನವಾಗಿ ರೂಪಾಂತರಗೊಂಡು, ೨೦೧೪ರ ಡಿಸೆಂಬರ್ಗೆ ಕಿರುಷಷ್ಠಿಯಂದು ಪ್ರಥಮ ಬಾರಿಗೆ ಎಡೆಸ್ನಾನ ನಡೆದಿತ್ತು. ಬಳಿಕ ೨೦೧೫ ಚಂಪಾಷಷ್ಠಿ ಜಾತ್ರೋತ್ಸವದ ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಹಾಗೂ ೨೦೧೬ರ ಜನವರಿಯಲ್ಲಿ ನಡೆದ ಕಿರುಷಷ್ಠಿಗೆ ಎಡೆಸ್ನಾನ ನೆರವೇರಿತ್ತು. ಈ ಬಾರಿ ಚಂಪಾಷಷ್ಠಿ ಜಾತ್ರೋತ್ಸವದ ಚೌತಿ ದಿನ ಎಡೆಸ್ನಾನ ಸೇವೆ ನಡೆಯುವ ಮೂಲಕ ನಾಲ್ಕನೇ ಬಾರಿಗೆ ಎಡೆಸ್ನಾನ ಸಾಂಗವಾಗಿ ನೆರವೇರಿದೆ.